ಅಣತಿಯ ಅಪ್ಪುಗೆ, ತೋರಿಕೆಯ ಒಗ್ಗಟ್ಟು! ಆಹಾ ಎಂತಹ ನಾಟಕವಯ್ಯಾ, ಕಾಂಗ್ರೆಸ್ಬೊಂಬೆಯಾಟ: ಬಿಜೆಪಿ ಲೇವಡಿ | JANATA NEWS
ಬೆಂಗಳೂರು : ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದ ಮೇದಿಕೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಪ್ಪುಗೆಯನ್ನು ಅಣತಿಯ ಅಪ್ಪುಗೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಸಿದ್ದರಾಮಯ್ಯ-ಡಿಕೆಶಿಯದ್ದು ತೋರಿಕೆಯ ನಾಟಕ ಒಗ್ಗಟ್ಟು, ಅಣತಿಯ ಅಪ್ಪುಗೆಯಷ್ಟೆ, ಇದು ಎಷ್ಟು ದಿನ ನೋಡಬೇಕಿದೆ ಎಂದು ಬಿಜೆಪಿ ನಾಯಕರು ಅಣಕಿಸುತ್ತಿದ್ದಾರೆ. ಇದಕ್ಕೆ ಕಾರಣ ಕಾರ್ಯಕ್ರಮ ವೇದಿಕೆಯಲ್ಲಿ ಡಿ ಕೆ ಶಿವಕುಮಾರ್ ಅವರು ಭಾಷಣ ಮಾಡಿ ಸಿದ್ದರಾಮಯ್ಯನವರಿಗೆ ಶಾಲು ಹೊದೆಸಿ, ಇಂದಿರಾ ಗಾಂಧಿಯವರ ಪುಸ್ತಕ ಕೊಟ್ಟ ನಂತರ ಕೈಯೆತ್ತಿ ಪ್ರೇಕ್ಷಕರೆದುರು ಕೈಬೀಸಿದರು. ಸಿದ್ದರಾಮಯ್ಯನವರು ಕೂಡ ನಗುತ್ತಾ ಕೈಬೀಸಿದರು. ಆದರೆ ಅಷ್ಟಕ್ಕೇ ಮುಗಿಯಲಿಲ್ಲ.
ಪಕ್ಕದಲ್ಲಿ ಕುಳಿತಿದ್ದ ರಾಹುಲ್ ಗಾಂಧಿ ಕೈ ಸನ್ನೆ ಮಾಡಿ ಡಿಕೆ ಶಿವಕುಮಾರ್ ಅವರಿಗೆ ಸಿದ್ದರಾಮಯ್ಯನವರನ್ನು ಆಲಂಗಿಸಿಕೊಳ್ಳಿ ಎಂದು ಸೂಚನೆ ಕೊಟ್ಟರು. ಆಗ ಡಿ ಕೆ ಶಿವಕುಮಾರ್ ಅವರಿಗೆ ಇಚ್ಛೆಯಿತ್ತೋ, ಇಲ್ಲವೋ ಸಿದ್ದರಾಮಯ್ಯನವರನ್ನು ಆಲಂಗಿಸಿಕೊಂಡರು. ಇದನ್ನೇ ಹಿಡಿದುಕೊಂಡು ಬಿಜೆಪಿ ಟ್ವೀಟ್ ಮಾಡಿ ಅಣಕಿಸಿದೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಬಿಜೆಪಿ, ಇದು ಅಣತಿಯ ಅಪ್ಪುಗೆ, ತೋರಿಕೆಯ ಒಗ್ಗಟ್ಟು ! ಎಂತಹ ನಾಟಕವಯ್ಯಾ! ಎಂದು ವ್ಯಂಗ್ಯವಾಡಿದೆ. ಬುಧವಾರ ದಾವಣಗೆರೆಯ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರಿಗೆ ರೇಶ್ಮೆ ಶಾಲು ಹೊದಿಸಿ ಇಂದಿರಾ ಗಾಂಧಿ ಅವರ ಭಾವಾಚಿತ್ರ ನೀಡಿದ್ದರು.