ಹರಿಯುತ್ತಿದ್ದ ನೀರಲ್ಲಿ ಕಾರು ದಾಟಿಸಲು ಹೋಗಿ ಕೊಚ್ಚಿ ಹೋದರು, ಕಾರಿನ ಗ್ಲಾಸ್ ಒಡೆದು ಇಬ್ಬರ ರಕ್ಷಣೆ ಮಾಡಿದ ಸ್ಥಳೀಯರು | JANATA NEWS
ಚಿಕ್ಕಮಗಳೂರು : ರಸ್ತೆ ಮೇಲೆ ಸುಮಾರು ಐದು ಅಡಿ ನೀರು ಹರಿಯುತ್ತಿದ್ದರೂ ಕಾರು ಚಾಲಕ ಕಾರನ್ನು ಚಲಾಯಿಸಿದ್ದಾನೆ. ನೀರಿನ ಸೆಳತಕ್ಕೆ ಕಾರು ಕೊಚ್ಚಿ ಹೋಗಿದ್ದು, ಆ ಕೂಡಲೇ ಎಚ್ಚೆತ್ತ ಸ್ಥಳೀಯರು ಕಾರಿನಲ್ಲಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಅಯ್ಯನಕೆರೆ, ತುಂಬಿ ಕೋಡಿ ಬಿದ್ದಿದೆ. ಕೋಡಿ ಬಿದ್ದ ನೀರು ಎಲ್ಲೆಂದರಲ್ಲಿ ನುಗ್ಗುತ್ತಿರುವುದರಿಂದ ಸಖರಾಯಪಟ್ಟಣದಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ರಸ್ತೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಕಾರನ್ನು ಚಲಾಯಿಸಲು ಹೋಗಿ ಕಾರು ಹಳ್ಳಕ್ಕೆ ಉರುಳಿ ಬಿದ್ದಿದೆ. ನೀರಿನ ಸೆಳತಕ್ಕೆ ಕಾರು ಕೊಚ್ಚಿ ಹೋಗಿದೆ.
ಕೇತುಮಾರನಹಳ್ಳಿ ಗಿರೀಶ್ ಎಂಬುವರಿಗೆ ಸೇರಿದ ಕಾರು ಇದಾಗಿದೆ. ನೀರಿನ ರಭಸಕ್ಕೆ ಕಾರು ಕೊಚ್ಚಿ ಹೋಗುತ್ತಿದ್ದನ್ನು ಗಮನಿಸಿದ ಸ್ಥಳೀಯರು ಕಾರಿನ ಗ್ಲಾಸ್ ಒಡೆದು ಹಗ್ಗ ಕಟ್ಟಿ ಜೆಸಿಬಿ ಮೂಲಕ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ನೀರಿನಲ್ಲಿ ಪ್ರಾಣ ಕಳೆದುಕೊಳ್ಳ ಬೇಕಿದ್ದ ಇಬ್ಬರ ಪ್ರಾಣ ಉಳಿದಿದೆ. ಸ್ಥಳೀಯರ ಕಾರ್ಯಕ್ಕೆ ಮೆಚ್ಚಿಗೆ ವ್ಯಕ್ತವಾಗಿದೆ.