ಅರುಂಧತಿ ಸಿನಿಮಾದಿಂದ ಪ್ರಭಾವಿತನಾದ ವಿದ್ಯಾರ್ಥಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ | JANATA NEWS
ತುಮಕೂರು : ತೆಲುಗಿನ ಅರುಂಧತಿ ಸಿನಿಮಾ ನೋಡಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ
ಮೃತ ಯುವಕನನ್ನು ರೇಣುಕಾ ಪ್ರಸಾದ್ (22) ಎಂದು ಗುರುತಿಸಲಾಗಿದೆ. ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಸ್ತೆ ಬದಿಯಲ್ಲಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಈ ವೇಳೆ ನೋವು ತಾಳಲಾರದೇ ರಸ್ತೆಯಲ್ಲಿ ಕಿರುಚಾಡುತ್ತಾ, ಒದ್ದಾಡುತ್ತಿದ್ದ ಯುವಕನನ್ನು ಸ್ಥಳೀಯರು ರಕ್ಷಿಸಿ ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ತೆಲುಗಿನ ಅರುಂಧತಿ ಸಿನಿಮಾದಿಂದ ಪ್ರಭಾವಿತನಾಗಿದ್ದ ಈತ, ಹಲವಾರು ಬಾರಿ ಅರುಂಧತಿ ಸಿನಿಮಾವನ್ನು ನೋಡಿ ಅದರಲ್ಲಿನ ನಾಯಕಿಯಂತೆ ಆಗಬೇಕು ಅಂತಾ ಅಂದುಕೊಂಡಿದ್ದನು. ಸಿನಿಮಾದಲ್ಲಿ ದುಷ್ಟ ಶಕ್ತಿ ಹೊಂದಿದ ಶತ್ರುವನ್ನು ಸಾಯಿಸಲು ನಾಯಕಿ ಸ್ವಯಂ ಮರಣ ಹೊಂದುತ್ತಾಳೆ. ಆಕೆಯ ಶವವನ್ನು ಧಹಿಸಿ ಅವಳ ಮೂಳೆಯಿಂದ ಆಯುಧ ತಯಾರಿಸಲಾಗುತ್ತದೆ. ಆಕೆ ಪುನರ್ಜನ್ಮ ಪಡೆದು ಅದೇ ಆಯುಧದಿಂದ ಶತ್ರು ಸಂಹಾರ ಮಾಡುತ್ತಾಳೆ. ಈ ಕಥಾ ಹಂದರ ಹೊಂದಿರುವ ಸಿನಿಮಾದಿಂದ ಪ್ರಭಾವಿತನಾದ ವಿದ್ಯಾರ್ಥಿ ರೇಣುಕಾ, ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನಲಾಗಿದೆ.