ಸಾವರ್ಕರ್ ಫೋಟೋಗೆ ಮೊಟ್ಟೆ ಹೊಡೆದು, ಕಾಲಿನಲ್ಲಿ ತುಳಿದು, ಬೆಂಕಿ ಹಚ್ಚಿದ ಕಾಂಗ್ರೆಸ್ | JANATA NEWS
ಧಾರವಾಡ : ಕಾಂಗ್ರೆಸ್ ಪ್ರತಿಭಟನೆಯಲ್ಲಿ ವೀರ್ ಸಾವರ್ಕರ್ ಅವರ ಭಾವಚಿತ್ರಕ್ಕೆ ಮೊಟ್ಟೆ ಒಡೆದು, ಬಳಿಕ ಕಾಲಿನಲ್ಲಿ ಭಾವಚಿತ್ರ ತುಳಿದು, ನಂತರ ಕೈ ಕಾರ್ಯಕರ್ತರು ಸಾವರ್ಕರ್ ಭಾವಚಿತ್ರ ದಹಿಸಿರುವ ಘಟನೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ಕೊಡಗಿನ ಮಳೆಹಾನಿ ಪ್ರದೇಶಗಳ ಭೇಟಿಗೆ ತೆರಳಿದ್ದ ಸಂದರ್ಭದಲ್ಲಿ ಹಿಂದೂಪರ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದರು. ಇದಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಿ, ರಾತ್ರಿಯೇ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಘಟನೆ ಸಂಬಂಧ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಆಕ್ರೋಶ ಮುಂದುವರಿಸಿದ್ದು, ಬಿಜೆಪಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಸಾವರ್ಕರ್ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ಮೊಟ್ಟೆ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಾವರ್ಕರ್ ಅವರ ಭಾವಚಿತ್ರವನ್ನು ಬೂಟುಗಾಲಿನಿಂದ ತುಳಿದು ಅಪಮಾನ ಮಾಡಿ, ಧಿಕ್ಕಾರ ಕೂಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರತಿಭಟನೆ ನೇತೃತ್ವ ವಹಿಸಿದ್ದ ಎಐಸಿಸಿ ಸದಸ್ಯ ದೀಪಕ ಚಿಂಚೋರೆ ನಾನು ಅದನ್ನು ನೋಡಿಲ್ಲ. ಅದು ಪೂರ್ವನಿಯೋಜಿತವೂ ಅಲ್ಲ. ಯಾರಾದರೂ ಬಿಜೆಪಿಯವರೇ ಮಾಡಿಸಿರಬಹುದು. ನಮ್ಮಲ್ಲಿ ಅಂತಹ ಸಂಸ್ಕೃತಿ ಇಲ್ಲ. ಬಿಜೆಪಿಯಲ್ಲಿ ಆ ಸಂಸ್ಕೃತಿ ಇದೆ ಎಂದು ಹೇಳಿದರು.
ನಮ್ಮ ಕಾರ್ಯಕರ್ತರು ಅಂಥವರಲ್ಲ. ಶಾಂತಿಯುತವಾದ ಪ್ರತಿಭಟನೆ ಮಾಡಿದ್ದೇವೆ. ಕೇವಲ ಅರಗ ಜ್ಞಾನೇಂದ್ರ ಪ್ರತಿಕೃತಿ ಮಾತ್ರ ದಹಿಸಿದ್ದೇವೆ. ಅಂಥದ್ದನ್ನು ಮಾಡಲು ಸಾಧ್ಯವಿಲ್ಲ. ಅದನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.