ಹನಿಟ್ರ್ಯಾಪ್ ಪ್ರಕರಣ: ಉದ್ಯಮಿಯಿಂದ ಲಕ್ಷ ಲಕ್ಷ ವಸೂಲಿ, ಯುವತಿ ಅರೆಸ್ಟ್ | JANATA NEWS
ಮಂಡ್ಯ : ಚಿನ್ನಾಭರಣ ಅಂಗಡಿ ಮಾಲೀಕನನ್ನು ಹನಿಟ್ರಾಪ್ಗೆ ಒಳಪಡಿಸಿ 50 ಲಕ್ಷ ರೂ. ವಸೂಲಿ ಮಾಡಿರುವ 6 ತಿಂಗಳ ಬಳಿಕ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಜಗನ್ನಾಥಶೆಟ್ಟಿ ಎಂಬುವರೇ ಹನಿಟ್ರ್ಯಾಪ್ಗೆ ಒಳಗಾಗಿ 50 ಲಕ್ಷ ಕಳೆದುಕೊಂಡವರಾಗಿದ್ದಾರೆ. ಸುಭಾಷ್ನಗರ ಬಡಾವಣೆಯ ಸಲ್ಮಾಬಾನು, ಜಯಂತ್ ಹಾಗೂ ಇತರೆ ನಾಲ್ಕು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಫೆಬ್ರವರಿ 26 ರಂದು ಮೈಸೂರಿನಲ್ಲಿ ಈ ಕೃತ್ಯ ನಡೆದಿದ್ದು, ಮಂಗಳೂರಿಗೆ ತೆರಳಲು ಆ ದಿನ ರಾತ್ರಿ ಮಂಡ್ಯದಲ್ಲಿ ಬಸ್ಸಿಗಾಗಿ ಜಗನ್ನಾಥ್ ಶೆಟ್ಟಿ ಕಾಯುತ್ತಿದ್ದರು. ಈ ವೇಳೆ ಮೈಸೂರಿಗೆ ಡ್ರಾಪ್ ಕೊಡುವುದಾಗಿ ತಿಳಿಸಿ ನಾಲ್ವರು ಕಾರಿನಲ್ಲಿ ಅವರನ್ನು ಕರೆದೊಯ್ದಿದ್ದಾರೆ.
ಸ್ವಲ್ಪ ಪರಿಚಯವಿದ್ದ ಕಾರಣ ಜಗನ್ನಾಥ್ ಕಾರಿನಲ್ಲಿ ಹೋಗಿದ್ದಾರೆ . ಮೈಸೂರು ಸಿಟಿ ತಲುಪುತ್ತಿದ್ದಂತೆ ಕಾರಿನಲ್ಲಿದ್ದವರು ತಮ್ಮ ಬಳಿ ಇದ್ದ ಚಿನ್ನದ ಬಿಸ್ಕೇಟ್ ಮಾದರಿಯನ್ನು ತೆಗೆದು ಇದು ಚಿನ್ನದ ಬಿಸ್ಕೆಟ್ಟಾ ಎಂದು ಪ್ರಶ್ನಿಸಿದರು. ಈ ಬಗ್ಗೆ ಪರಿಶೀಲಿಸಬೇಕು ಎಂದು ತಿಳಿಸಿದಾಗ ಇಲ್ಲೇ ಬಂದು ನೋಡಿ ತಿಳಿಸಿ ಹೋಗುವಂತೆ ಬಲವಂತ ಮಾಡಿದ್ದಾರೆ.
ಬಳಿಕ ಅವರು ಖಾಸಗಿ ಹೊಟೇಲೊಂದರ ಕೊಠಡಿಗೆ ಕರೆದೊಯ್ದರು. ರೂಮ್ನಲ್ಲಿ ಯುವತಿ ಜೊತೆ ವಿಡಿಯೋ ಚಿತ್ರೀಕರಿಸಿಕೊಂಡು ಬಳಿಕ 4 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ.
ಕೊನೆಗೆ 50 ಲಕ್ಷ ಕೊಟ್ಟು ಅಲ್ಲಿಂದ ಜಗನ್ನಾಥ್ ತೆರಳಿದ್ದರು. ಇಷ್ಟೆಲ್ಲಾ ಆದರೂ ಮತ್ತೆ ಈಗ ಹಣಕ್ಕಾಗಿ ಆರೋಪಿಗಳು ಪೀಡಿಸುತ್ತಿದ್ದು, ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದೆ. ಇದರಿಂದ ಬೇಸತ್ತ ಜಗನ್ನಾಥ್ ಶೆಟ್ಟಿ ಅವರು 6 ತಿಂಗಳ ಬಳಿಕ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಲ್ಮಾ ಬಾನು ಅವರನ್ನು ಬಂಧಿಸಿರುವ ಪೊಲೀಸರು ಆಕೆಯನ್ನು ನ್ಯಾಯಾಧೀಶರ ಮುಂದೆ ಹಾಜಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ.