ರಾಮನಗರದ ನೆರೆಪೀಡಿತ ಪ್ರದೇಶಕ್ಕೆ ಸಿಎಂ ಬೊಮ್ಮಾಯಿ, ಎಚ್ಡಿಕೆ ಭೇಟಿ | JANATA NEWS
ರಾಮನಗರ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗು ಮಾಜಿ ಸಿಎಂ ಕುಮಾರಸ್ವಾಮಿ ರಾಮನಗರ ಜಿಲ್ಲೆಯ ಮಳೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ರಣಭೀಕರ ಮಳೆಗೆ ರಾಮನಗರ ಅಕ್ಷರಶಃ ತತ್ತರಿಸಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. 500 ಮೀಟರ್ಗೂ ಹೆಚ್ಚು ದೂರ ರೈಲ್ವೆ ಹಳಿ ಮೇಲೆ ನಡೆದು ಬಕ್ಷಿ ಕೆರೆ ವೀಕ್ಷಣೆ ಮಾಡಿದ ಸಿಎಂಗೆ ಎಚ್ಡಿಕೆ, ಸಚಿವರಾದ ಆರ್.ಅಶೋಕ್, ಡಾ.ಸಿ.ಎನ್.ಅಶ್ವಥ್ ನಾರಾಯಣ್, ಶಾಸಕಿ ಅನಿತಾ ಕುಮಾರಸ್ವಾಮಿ ಸಾಥ್ ನೀಡಿದ್ದಾರೆ.
ರಾಮನಗರದ ಮಾರುತಿ ಬಡಾವಣೆಯಲ್ಲಿ ಭಕ್ಷಿಕೆರೆ ಒಡೆದು ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಯಾಗಿರುವುದನ್ನು ಪರಿಶೀಲಿಸಿದ ಮುಖ್ಯಮಂತ್ರಿ, ಕೆರೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಭಕ್ಷಿಕೆರೆ ಒಡೆದು 100 ರಿಂದ 150 ಮನೆಗಳಿಗೆ ಹಾನಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು. ಭಕ್ಷಿಕೆರೆ ನಂತರ ರೈತರ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ, ಪರಿಹಾರದ ಭರವಸೆ ನೀಡಿದರು. ಮಳೆಯಿಂದ ಕುಸಿದು ಬಿದ್ದಿರುವ ಮನೆಗಳಿಗೆ ತಕ್ಷಣ 1 ಲಕ್ಷ ರೂಪಾಯಿ ಹಾಗೂ ಒಟ್ಟಾರೇ 5 ಲಕ್ಷ ರೂ. ಪರಿಹಾರವನ್ನು ಹಂತ ಹಂತವಾಗಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಮಾತನಾಡಿ, ರಾಮನಗರ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಅಪಾರ ಹಾನಿಯಾಗಿದೆ. ಸಂತ್ರಸ್ತರಿಗೆ ತಕ್ಷಣವೇ ಗಂಜಿಕೇಂದ್ರ, ಸುರಕ್ಷಿತ ಸ್ಥಳಾಂತರ, ದವಸ-ಧಾನ್ಯ ವಿತರಣೆ ಮತ್ತು ಮನೆಗಳಿಂದ ನೀರು ತೆರವಿಗೆ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ ಎಂದಿದ್ದಾರೆ.
ನಮ್ಮ ರಾಮನಗರ ಜಿಲ್ಲಾದ್ಯಂತ ಸುರಿದ ವಿಪರೀತ ಮಳೆಯಿಂದಾಗಿ ಹಾನಿಯುಂಟಾಗಿರುವ ಪ್ರದೇಶಗಳಿಗೆ ಮಾನ್ಯ ಮುಖ್ಯಮಂತ್ರಿ @BSBommai ಅವರ ನೇತೃತ್ವದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ.@RAshokaBJP @hd_kumaraswamy https://t.co/MYRtsWsd4o pic.twitter.com/p9cZpxbJe0
— Dr. Ashwathnarayan C. N. (@drashwathcn) August 29, 2022