ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಪೊಲೀಸ್ ಕಸ್ಟಡಿಗೆ | JANATA NEWS
ಚಿತ್ರದುರ್ಗ : ಪೋಕ್ಸೋ ಪ್ರಕರಣದಲ್ಲಿ ಮೊದಲ ಆರೋಪಿ ಮುರುಘಾ ಮಠದ ಸ್ವಾಮೀಜಿ ಶಿವಮೂರ್ತಿ ಮುರುಘಾ ಶರಣರನ್ನು 3 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಶುಕ್ರವಾರ ಮಧ್ಯಾಹ್ನ ಕೋರ್ಟ್ಗೆ ಶ್ರೀಗಳನ್ನು ಕರೆತರಲಾಯಿತು. ಸಿಆರ್ಪಿಸಿ ಸೆಕ್ಷನ್ 41 D ಅಡಿಯಲ್ಲಿ ತನಿಖಾಧಿಕಾರಿಗಳು ಅರ್ಜಿ ಸಲ್ಲಿಸಿದ್ದರು. ತನಿಖಾಧಿಕಾರಿಗಳು ಸಲ್ಲಿಸಿದ್ದ ಅರ್ಜಿಗೆ ಶ್ರೀಗಳ ಪರ ವಕೀಲರು ತಕರಾರು ಅರ್ಜಿ ಹಾಕಿರಲಿಲ್ಲ.
ತನಿಖಾಧಿಕಾರಿಗಳ ಅರ್ಜಿ ಪುರಸ್ಕರಿಸಿ ಪೊಲೀಸ್ ಕಸ್ಟಡಿಗೆ ಮುರುಘಾ ಶರಣರನ್ನು ಒಪ್ಪಿಸಿ 2ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶೆ ಕೋಮಲಾ ಆದೇಶಿಸಿದರು.
ಮುರುಘಾ ಶ್ರೀಯವರನ್ನು ಸೆಪ್ಟೆಂಬರ್ 5ರಂದು ಮತ್ತೆ ಕೋರ್ಟ್ ಮುಂದೆ ಹಾಜರು ಮಾಡುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ. ಅದರಂತೆ ಅಂದು ಬೆಳಗ್ಗೆ 11 ಗಂಟೆಗೆ ಪೊಲೀಸರು ಶ್ರೀಗಳನ್ನು ಕೋರ್ಟ್ಗೆ ಹಾಜರುಪಡಿಸಲಿದ್ದಾರೆ.
ಮುರುಘಾ ಮಠದ ಹಾಸ್ಟೆಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದ ಮೇಲೆ ಆಗಸ್ಟ್ 26 ಶುಕ್ರವಾರ ಮುರುಘಾಶ್ರೀಗಳ ವಿರುದ್ಧ ಮೈಸೂರಿನ ನಜರ್ಬಾದ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.