ತಾಯಿ, ಪ್ರಿಯಕರನ ಜೊತೆಗೂಡಿ ತಂದೆಯನ್ನೇ ಕೊಂದ ಮಗಳು | JANATA NEWS
ಬೆಳಗಾವಿ : ನಗರದ ಕ್ಯಾಂಪ್ ಪ್ರದೇಶದಲ್ಲಿ ಕಳೆದ ಒಂದು ವಾರಗಳ ಹಿಂದೆ ಸುಧೀರ್ ಕಾಂಬಳೆ(57) ಎಂಬುವವರ ಹತ್ಯೆಯಾಗಿತ್ತು.
ಮಗಳು, ತಾಯಿ, ಪ್ರಿಯಕರನ ಜೊತೆ ಸೇರಿ ತಂದೆಯನ್ನೇ ಕೊಲೆ ಮಾಡಿರುವುದು ಪತ್ತೆಯಾಗಿದೆ. ಹತ್ಯೆಗೀಡಾದ ಸುಧೀರ ಕಾಂಬಳೆ ಪತ್ನಿ ರೋಹಿಣಿ ಕಾಂಬಳೆ ಮತ್ತು ಪುತ್ರಿ ಸ್ನೇಹಾ ಕಾಂಬಳೆ ಹಾಗೂ ಆಕೆಯ ಸ್ನೇಹಿತ ಅಕ್ಷಯ್ ಮಹಾದೇವವಿಠಕರ ಬಂಧಿತ ಆರೋಪಿಗಳು.
ಸುಧೀರ ಕಾಂಬಳೆ ದುಬೈನಲ್ಲಿ ಕೆಲಸಕ್ಕಿದ್ದ. ಆ ವೇಳೆ ಬೆಳಗಾವಿಯಲ್ಲಿ ತಾಯಿ, ಮಗಳು ಇಬ್ಬರೇ ವಾಸವಾಗಿದ್ದರು. ಇವರಿಬ್ಬರ ಜೀವನಕ್ಕೆ ಪತಿ ಸುಧೀರ ಪ್ರತಿ ತಿಂಗಳು ಲಕ್ಷಗಟ್ಟಲೇ ಹಣ ಕಳುಹಿಸಿಕೊಡುತ್ತಿದ್ದ. ಆ ವೇಳೆ ತಾಯಿ, ಮಗಳು ಬಂದ ಹಣದಲ್ಲಿ ಮಜಾ ಮಾಡಿಕೊಂಡು ಸ್ವತಂತ್ರವಾಗಿದ್ದರು
ಕೋವಿಡ್ ನಂತರ ಸುಧೀರ ದುಬೈನಲ್ಲಿದ್ದ ಕೆಲಸ ಕಳೆದುಕೊಂಡು ಮರಳಿ ಬೆಳಗಾವಿಗೆ ಬಂದ. ಆದರೆ, ಇಲ್ಲಿ ಪತ್ನಿ, ಪುತ್ರಿಯ ನಡುವಳಿಕೆ, ಅವರ ಕಾರ್ಯಚಟುವಟಿಕೆಗಳನ್ನು ಕಂಡು ಬೇಸತ್ತು ಅವರಿಬ್ಬರಿಗೂ ಕಡಿವಾಣ ಹಾಕಿದ. ತಂದೆ ಹಾಕುತ್ತಿದ್ದ ನಿರ್ಬಂಧಗಳಿಂದ ಪುತ್ರಿ ಸ್ನೇಹಾ ರೋಸಿಹೋಗಿದ್ದಳು.
ತಂದೆಯನ್ನೇ ಹತ್ಯೆ ಮಾಡಲು ಯೋಜನೆ ರೂಪಿಸಿದರು. ಇದಕ್ಕೆ ತಾಯಿ ಸಾಥ್ ನೀಡಿದಳು. ಪುತ್ರಿಯ ಪ್ರಿಯಕರ, ಪುಣೆಯ ಅಕ್ಷಯ ಮಹಾದೇವ ವಿಠಕರ ಜೊತೆಗೂಡಿ ಪ್ಲಾನ್ ಮಾಡಿದರು. ಅದರಂತೆ ಕೊಲೆಗೆ ಎರಡು ದಿನ ಮುನ್ನ ಸೆ.15ರಂದು ಪುಣಾದಿಂದ ಅಕ್ಷಯ್ ಬಂದು ಬೆಳಗಾವಿಯ ಲಾಡ್ಜ್ನಲ್ಲಿದ್ದ.
ಸುಧೀರ್ ಕಾಂಬಳೆ ಅವರು ಸೆಪ್ಟಂಬರ್ 17ರಂದು ಮನೆಯ ಮೇಲ್ಮಹಡಿಯ ರೂಮ್ನಲ್ಲಿ ಮಲಗಿದ್ದರು. ಅಂದು ಬೆಳಗಿನ ಜಾವ ಹಿಂಬಾಗಿಲಿನಿಂದ ಅಕ್ಷಯ್ ಮನೆಗೆ ಬಂದಿದ್ದ. ಬಳಿಕ ಮೂವರು ಸೇರಿ ಸುಧೀರ್ ಹೊಟ್ಟೆ, ಕತ್ತು, ಕೈ, ಮುಖಕ್ಕೆ ಚಾಕುವಿನಿಂದ ಇರಿದು ಬರ್ಬರ ಹತ್ಯೆಗೈದಿದ್ದರು. ಘಟನೆಯ ಬಳಿಕ ಅಕ್ಷಯ್ ಪುಣೆಗೆ ವಾಪಸ್ ಹೋಗಿದ್ದ. ಮರುದಿನ ಬೆಳಿಗ್ಗೆ ಯಾರೋ ಕೊಲೆ ಮಾಡಿದ್ದಾರೆ ಅಂತಾ ತಾಯಿ ಮಗಳು ಪ್ರಕರಣ ದಾಖಲಿಸಿದ್ದರು.
ಈ ಕುರಿತು ಕ್ಯಾಂಪ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.