ಮೈಸೂರಿನಲ್ಲಿ ಮಹಿಳಾ ವ್ಯಾಪಾರಿ ಯೋಗಕ್ಷೇಮ ವಿಚಾರಿಸಿದ ಸಿಎಂ ಬೊಮ್ಮಾಯಿ | JANATA NEWS
ಮೈಸೂರು : ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರು. ದೇವಾಲಯ ಪ್ರವೇಶಿಸಿ ನಾಡದೇವತೆಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವ ಮಹಿಳಾ ವ್ಯಾಪಾರಿ ಬಳಿ ತೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯೋಗಕ್ಷೇಮ ವಿಚಾರಿಸಿದ ಘಟನೆ ಚಾಮುಂಡಿ ಬೆಟ್ಟದಲ್ಲಿ ನಡೆಯಿತು.
ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗ ನಾಡ ಅಧಿದೇವತೆ ಉತ್ಸವ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಿದ ಸಿಎಂ, ಬಳಿಕ ದೇವಸ್ಥಾನದಿಂದ ದಾಸೋಹ ಭವನದ ಗೇಟ್ ತನಕ ನಡೆದುಕೊಂಡು ಬಂದು ಸಾರ್ವಜನಿಕರಿಗೆ ದಸರಾ ಶುಭಾಶಯ ತಿಳಿಸಿದರು. ಅಲ್ಲದೇ, ಹತ್ತಿರ ಬಂದ ಯುವಕರಿಗೆ ಹಸ್ತಲಾಘವ ನೀಡಿ ಕಳುಹಿಸಿದರು.
ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ ಬಳಿಕ ಚಿನ್ನದ ಅಂಬಾರಿಯಲ್ಲಿ ಇಡುವ ನಾಡದೇವಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಮೈಸೂರಿನ ಅರಮನೆಗೆ ತೆಗೆದುಕೊಂಡು ಹೋಗಲಾಯಿತು.
ದೇವಸ್ಥಾನದಿಂದ ನಡೆದುಕೊಂಡು ಬರುವಾಗ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವ ಮಹಿಳಾ ವ್ಯಾಪಾರಿ ಬಳಿ ಸಿಎಂ ತೆರಳಿದಾಗ, ಒಂದು ಕ್ಷಣ ಮಹಿಳೆ ಗಾಬರಿಯಾದರು. ಈ ವೇಳೆ, ಸಿಎಂ ಹೆದರ ಬೇಡಿ, ಹೇಗಿದೆ ವ್ಯಾಪಾರ?, ಎರಡು ವರ್ಷದ ನಂತರ ವ್ಯಾಪಾರ ಚೆನ್ನಾಗಿ ನಡೆಯುತ್ತಿದ್ದೆಯಾ ? ಎಂದು ವ್ಯಾಪಾರಿ ಬಳಿ ಹೋಗಿ ಕುಶಲೋಪರಿ ವಿಚಾರಿಸಿದರು.
ವ್ಯಾಪಾರಿಗಳ ಜೊತೆ ಮಾತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೇವಾಲಯದಿಂದ ಹೊರಬಂದು ವ್ಯಾಪಾರಿಗಳತ್ತ ಕೈ ಬೀಸಿದರು. ಹಣ್ಣುಕಾಯಿ ವ್ಯಾಪಾರ ಮಾಡುತ್ತಿದ್ದ ಮಹಿಳೆ ಬಳಿ ವ್ಯಾಪಾರ ಹೇಗೆ ನಡೆಯುತ್ತಿದೆ? ಎಂದು ಕೇಳಿದರು.
ಪೂಜೆ ಹಣ್ಣುಕಾಯಿಗೆ ಎಷ್ಟು ರೂ. ಎಂದು ಮುಖ್ಯಮಂತ್ರಿಗಳು ವಿಚಾರಿಸಿದರು. ಆಗ ಮಹಿಳೆ 100 ರೂ. ಎಂದು ಹೇಳಿದರು. ಆಗ ಬಸವರಾಜ ಬೊಮ್ಮಾಯಿ ಜಾಸ್ತಿ ಮಾಡಿಬಿಟ್ಟಿದ್ದೀರಾ? ಎಂದರು. ಮಹಿಳೆ ಇಲ್ಲಣ್ಣ ಎಂದು ಉತ್ತರ ನೀಡಿದರು.
ಐತಿಹಾಸಿಕ ಜಂಬೂ ಸವಾರಿ 10 ದಿನಗಳ ಮೈಸೂರು ದಸರಾಕ್ಕೆ ಬುಧವಾರ ಸಂಜೆ ಐತಿಹಾಸಿಕ ಜಂಬೂಸವಾರಿ ಮೂಲಕ ತೆರೆ ಬೀಳಲಿದೆ. ಮಧ್ಯಾಹ್ನ 2.36ರಿಂದ 2.50ರ ಒಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ.