ಹಿಂದೂ ಯುವಕನಿಗೆ ಬಲವಂತದ ಮತಾಂತರ: ಮಾಜಿ ಕಾರ್ಪೋರೇಟರ್ ಸೇರಿ ಮೂವರ ಬಂಧನ | JANATA NEWS
ಮಂಡ್ಯ : ಮಂಡ್ಯ ಮೂಲದ ಯುವಕನೊಬ್ಬನನ್ನು ಬಲವಂತವಾಗಿ ಮತಾಂತರ ಮಾಡಿದ ಪ್ರಕರಣದ ಪ್ರಮುಖ ಆರೋಪಿ, ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಅನ್ಸರ್ ಪಾಷಾ ಎಂಬುವರನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ.
ಇತ್ತೀಚಿಗೆ ಮಂಡ್ಯ ಮೂಲದ ಯುವಕನೊಬ್ಬ ಮತಾಂತರ ಕೂಪಕ್ಕೆ ಸಿಲುಕಿ ಅನುಭವಿಸಿದ್ದ ನೋವನ್ನು ವಿಡಿಯೋ ಮೂಲಕ ಎಳೆಎಳೆಯಾಗಿ ಬಿಚ್ಚಿಟ್ಟಿದ್ದ. ಈ ವಿಡಿಯೋ ವೈರಲ್ ಆಗಿತ್ತು.
ಬನಶಂಕರಿ ವಾರ್ಡ್ ಮಾಜಿ ಕಾರ್ಪೊರೇಟರ್ ಅನ್ಸರ್ ಪಾಷಾ, ನಯಾಜ್ ಖಾನ್ ಹಾಗೂ ಅಜೀಸಾಬ್ ಬಂಧಿತ ಆರೋಪಿಗಳಾಗಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬೆಂಗಳೂರಲ್ಲಿ ಮಂಡ್ಯ ಮೂಲದ ಯುವಕನ ಶ್ರೀಧರ್ / ಸಲ್ಮಾನ್ ಎಂಬಾತನನ್ನ ಮತಾಂತರ ಹಾಗೂ ಕತ್ನಾ ಮಾಡಲಾಗಿತ್ತು. ಈ ಬಗ್ಗೆ ಹುಬ್ಬಳ್ಳಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ಬನಶಂಕರಿ ಠಾಣೆಗೆ ವರ್ಗಾವಣೆಯಾಗಿತ್ತು.
ಹಣಕಾಸಿನ ನೆರವಿನ ನೆಪದಲ್ಲಿ ಪ್ರಕರಣದ ಮೊದಲ ಆರೋಪಿ ಅತ್ತಾವರ್ ರೆಹಮಾನ್ ಕಳೆದ ಒಂದು ವರ್ಷದ ಹಿಂದೆ ಬನಶಂಕರಿ ಮಸೀದಿಗೆ ಸಂತ್ರಸ್ತ ಶ್ರೀಧರ್ನನ್ನು ಕರೆತಂದು ಎಲ್ಲ ಆರೋಪಿಗಳನ್ನು ಪರಿಚಯಿಸಿದ್ದ. ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಹಂತ - ಹಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ಒತ್ತಡ ಹೇರಿದ್ದರು.
ಶ್ರೀಧರನಿಗೆ ಮೊಹಮ್ಮದ್ ಸಲ್ಮಾನ್ ಎಂದು ನಾಮಕರಣ ಮಾಡಿ ಬಾಂಡ್ ಪೇಪರ್ ಬರೆಸಿಕೊಂಡಿದ್ದರು. ಬಳಿಕ ಅವನ ಮೊಬೈಲನ್ನ ಪಡೆದು ಒಂದು ವಾರಗಳ ಕಾಲ ಅಕ್ರಮ ಬಂಧನದಲ್ಲಿಟ್ಟಿದ್ದರಂತೆ. ಇದೆಲ್ಲ ಆದ ಮೇಲೆ ಬಲವಂತವಾಗಿ ಕತ್ನಾ ಮಾಡಿಸಿದ್ದಾರೆ, ಬಲವಂತವಾಗಿ ಗೋಮಾಂಸ ತಿನ್ನಿಸಿದ್ದಾರೆ. ಇದರೊಂದಿಗೆ ಜೊತೆಗೆ ವರ್ಷಕ್ಕೆ ಮೂರು ಜನರನ್ನು ಕರೆತಂದು ಮತಾಂತರ ಮಾಡಿಸಬೇಕೆಂದು ಒತ್ತಡ ಹೇರಿದ್ದರು ಎಂದು ಶ್ರೀಧರ್ ಆರೋಪಿಸಿದ್ದಾರೆ.