ಹಾಸನ ಬಳಿ ಭೀಕರ ಅಪಘಾತ: ಅಮ್ಮ, ಮಗಳು, ಮಗ ಸೇರಿದಂತೆ 9 ಜನ ಸಾವು | JANATA NEWS
ಹಾಸನ : ತಡರಾತ್ರಿ ಅರಸೀಕೆರೆ ತಾಲೂಕಿನಲ್ಲಿ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ 9 ಮಂದಿ ಮೃತಪಟ್ಟಿದ್ದಾರೆ.
ಕೆಎಸ್ಆರ್ಟಿ ಬಸ್, ಟಿಟಿ ವಾಹನ ಹಾಗೂ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಟೆಂಪೋ ಟ್ರಾವೆಲರ್ನಲ್ಲಿದ್ದ 4 ಮಕ್ಕಳು ಸೇರಿದಂತೆ ಒಟ್ಟು 9 ಜನರು ಸಾವನ್ನಪ್ಪಿದ್ದಾರೆ.
ಮೃತರನ್ನು ಲೀಲಾವತಿ (50), ಚೈತ್ರಾ (33), ಸಮರ್ಥ (10), ಡಿಂಪಿ (12), ತನ್ಮಯ್ (10), ಧ್ರುವ (2), ವಂದನಾ (20), ದೊಡ್ಡಯ್ಯ (60) ಹಾಗೂ ಭಾರತಿ (50) ಎಂದು ಗುರುತಿಸಲಾಗಿದೆ.
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಬಾಣವಾರ ಹೋಬಳಿ ಗಾಂಧಿ ನಗರ ಗ್ರಾಮದ ಬಳಿ ಶನಿವಾರ ತಡರಾತ್ರಿ ಈ ದುರಂತ ಸಂಭವಿಸಿದೆ. ಮೃತ 9 ಮಂದಿಯೂ ಸಂಬಂಧಿಕರು ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟು ಟಿಟಿ ವಾಹನದಲ್ಲಿ 14 ಮಂದಿ ಧರ್ಮಸ್ಥಳಕ್ಕೆ ತೆರಳಿದ್ದರು.
ಟ್ಯಾಂಕರ್, ಟಿಟಿ ವಾಹನಕ್ಕೆ ಡಿಕ್ಕಿಯಾಗುತ್ತಿದ್ದಂತೆ ಜಿಗ್-ಜಾಗ್ ರೀತಿಯಲ್ಲಿ ಅಪಘಾತಕ್ಕೀಡಾಯಿತು. ಸರ್ಕಾರಿ ಬಸ್ಸಿಗೆ ಡಿಕ್ಕಿ ಹೊಡೆಯಿತು. ಟಿಟಿಗೆ ಹಿಂದೆ-ಮುಂದೆ ಎರಡೂ ಭಾಗಕ್ಕೂ ಡಿಕ್ಕಿಯಾದ ಪರಿಣಾಮ ಭೀಕರವಾಗಿ ಅನಾಹುತ ಸಂಭವಿಸಿದೆ. ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದ ಕಾರಣ ಡಿವಿಯೇಷನ್ ಪಡೆಯದೆ ಹಾಲಿನ ಟ್ಯಾಂಕರ್ ಆಗಮಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಗಾಯಗೊಂಡಿರುವವರನ್ನು ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ 10 ಮಂದಿಗೆ ಗಾಯಗಳಾಗಿವೆ.
ಘಟನಾ ಸ್ಥಳಕ್ಕೆ ಬಾಣಾವರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.