ಆಧುನಿಕ ಭಗೀರಥ ಮಂಡ್ಯದ ಕೆರೆ ಕಾಮೇಗೌಡ ಇನ್ನಿಲ್ಲ | JANATA NEWS
ಮಂಡ್ಯ : ಆಧುನಿಕ ಭಗೀರಥ ಎಂದು ಕರೆಸಿಕೊಂಡಿದ್ದ ಕೆರೆ ಕಾಮೇಗೌಡ (84) ಸೋಮವಾರ ಮುಂಜಾನೆ 4 ಗಂಟೆ ಸಮಯದಲ್ಲಿ ನಿಧನರಾಗಿದ್ದಾರೆ.
ಕುಂದೂರು ಬೆಟ್ಟದ ತಪ್ಪಲಿನಲ್ಲಿ 16 ಕಟ್ಟೆಗಳನ್ನು ನಿರ್ಮಿಸಿ ಪ್ರಾಣಿ-ಪಕ್ಷಿಗಳಿಗೆ ಕುಡಿವ ನೀರೊದಗಿಸಿದ, ಅಂತರ್ಜಲ ವೃದ್ಧಿಗೆ ಪ್ರಮುಖ ಕೊಡುಗೆ ನೀಡಿದ, ಬೆಟ್ಟದ ತಪ್ಪಲಿನಲ್ಲಿ ಗಿಡನೆಟ್ಟು ಪರಿಸರ ಕಾಳಜಿ ಮೆರೆದ ಕಾಮೇಗೌಡರು 'ಆಧುನಿಕ ಭಗೀರಥ', 'ಕೆರೆಗಳ ಮನುಷ್ಯ' ಎಂದೇ ಹೆಸರುವಾಸಿಯಾಗಿದ್ದರು.
ಕಾಮೇಗೌಡರ ಕಾರ್ಯವನ್ನು ಮೆಚ್ಚಿ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ನಲ್ಲಿ ಶ್ಲಾಘಿಸಿದ್ದರು. ಇದರಿಂದ ಕಾಮೇಗೌಡರಿಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ರಾಜ್ಯೋತ್ಸವ ಪ್ರಶಸ್ತಿ, ಬಸವ ಪ್ರಶಸ್ತಿ ಸೇರದಂತೆ ಹಲವು ಪ್ರಶಸ್ತಿಗಳು ಕಾಮೇಗೌಡರಿಗೆ ಸಂದಿವೆ.
ಕಾಮೇಗೌಡರ ನಿಧನಕ್ಕೆ ಸಿಎಂ ಬೊಮ್ಮಾಯಿ ಸೇರಿದಂತೆ ಹಲವರು ಸಂತಾಪ ದುಃಖ ವ್ಯಕ್ತಪಡಿಸಿದ್ದಾರೆ. ಜಲ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಕೊಂಡು ಸುಮಾರು15 ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿ ಆಧುನಿಕ ಭಗೀರಥ ಎಂದೇ ಖ್ಯಾತಿ ಗಳಿಸಿದ್ದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಜಲಋಷಿ ಕಾಮೇಗೌಡರು ಇನ್ನಿಲ್ಲ ಎಂಬ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.