ಶಾಲೆಗಳಲ್ಲಿ ಪೋಷಕರಿಂದ ₹100 ವಸೂಲಿಗೆ ಸುತ್ತೋಲೆ: 48 ಗಂಟೆಯಲ್ಲಿ ಸುತ್ತೋಲೆ ಹಿಂಪಡೆದ ಶಿಕ್ಷಣ ಇಲಾಖೆ | JANATA NEWS
ಮೈಸೂರು : ಸರ್ಕಾರಿ ಶಾಲೆಗಳಲ್ಲಿ ಪೋಷಕರಿಂದ ದೇಣಿಗೆ ಸಂಗ್ರಹಿಸುವ ಬಗ್ಗೆ ಶಿಕ್ಷಣ ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆಯಲಾಗಿದೆ.
ಸಾರ್ವಜನಿಕರು, ಪೋಷಕರ ವಿರೋಧ ಹಿನ್ನೆಲೆ ಶಾಲಾ ಶ್ರೇಯೋಭಿವೃದ್ಧಿಗೆ ಪೋಷಕರಿಂದ 100 ರೂ. ದೇಣಿಗೆ ಸಂಗ್ರಹ ಆದೇಶವನ್ನು ಶಿಕ್ಷಣ ಇಲಾಖೆ ವಾಪಸ್ ಪಡೆದಿದೆ.
ಇದೀಗ ಈ ವಿಚಾರವು ಭಾರೀ ವಿವಾದಕ್ಕೆ ಕಾರಣವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಕೂಲಿ ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ಮಕ್ಕಳ ಪೋಷಕರಿಂದಲೇ ತಿಂಗಳಿಗೆ 100 ರೂಪಾಯಿ ದೇಣಿಗೆ ನೀಡುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಅಷ್ಟೇ ಅಲ್ಲದೇ ಈ ಸುತ್ತೋಲೆಯಲ್ಲಿ ಪೋಷಕರು ನೀಡುವ ಹಣವನ್ನ ಅಭಿವೃದ್ಧಿ ಪೂರಕ ಕಾರ್ಯಗಳಿಗೆ ಹಣ ಬಳಕೆ ಮಾಡಬಹುದು ಅಂತ ತಿಳಿಸಿತ್ತು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಇದು ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿರುವ ಸುತ್ತೋಲೆ. ಇದು ಶಿಕ್ಷಣ ಮಂತ್ರಿಗಳಿಗಾಗಲಿ, ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ್ದಲ್ಲ. ಕೆಲವರು ಈ ಸುತ್ತೋಲೆಯನ್ನ ಸರಿಯಾಗಿ ಓದಿಕೊಳ್ಳದೆ ಪ್ರತಿಕ್ರಿಯೆ ನೀಡಿದ್ದಾರೆ.
ಶಿಕ್ಷಣ ಇಲಾಖೆ ಅಕ್ಟೋಬರ್ 19ರಂದು ಈ ಸುತ್ತೋಲೆಯನ್ನು ಹೊರಡಿಸಿತ್ತು. ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆ, ಸಚಿವ ಬಿ ಸಿ ನಾಗೇಶ್ ಆದೇಶವನ್ನು ಹಿಂಪಡೆಯುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆ ಆದೇಶ ಜಾರಿಯಾದ 48 ಗಂಟೆ ಒಳಗೆ ವಾಪಸ್ ಪಡೆಯಲ್ಪಟ್ಟಿದೆ.
ಶಿಕ್ಷಣ ಇಲಾಖೆಯ ಸುತ್ತೋಲೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಶಿಕ್ಷಣ ಇಲಾಖೆ ನಡೆಗೆ ಪೋಷಕರು ಹಾಗೂ ಖಾಸಗಿ ಶಾಲಾ ಸಂಘಟನೆಗಳಿಂದಲೂ ವಿರೋಧ ಕೇಳಿಬರುತ್ತಿದೆ. ಶಾಲೆಗಳ ಖಾಸಗಿರಣದ ಹುನ್ನಾರ ಎಂದು ಪೋಷಕರು ಕಿಡಿಕಾರಿದ್ದಾರೆ.