ದೀಪಾವಳಿ ಬಟ್ಟೆ ಖರೀದಿಗೆ ಬಂದಿದ್ದ ಬಾಲಕನ ಕುತ್ತಿಗೆ ಸೀಳಿದ ಮಾಂಜಾ ದಾರ | JANATA NEWS
ಬೆಳಗಾವಿ : ದೀಪಾವಳಿ ಬಟ್ಟೆ ಖರೀದಿಗೆ ಬಂದಿದ್ದ ಬಾಲಕನ ಕುತ್ತಿಗೆ ಮಾಂಜಾ ದಾರ ಕುತ್ತಿಗೆಗೆ ಬಿಗಿದು ಐದು ವರ್ಷದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಇಲ್ಲಿಯ ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಹುಕ್ಕೇರಿ ತಾಲೂಕಿನ ಯಮಕನಮರಡಿ ಸಮೀಪದ ಅನಂತಪುರ ಗ್ರಾಮದ ವರ್ಧನ ಈರಣ್ಣ ಬೇಲಿ(5) ಮೃತ ಬಾಲಕ. ದೀಪಾವಳಿ ಹಬ್ಬದ ನಿಮಿತ್ತ ಬೆಳಗಾವಿ ನಗರಕ್ಕೆ ತಂದೆ ಜೊತೆ ಬಂದು ಬಟ್ಟೆ ಖರೀದಿಸಿದ್ದರು. ಬಳಿಕ ದ್ವಿಚಕ್ರ ವಾಹನದ ಮೇಲೆ ತಂದೆ ಈರಣ್ಣ ಅವರೊಂದಿಗೆ ವರ್ಧನ ತಮ್ಮೂರಿಗೆ ಹೊರಟಿದ್ದ. ದ್ವಿಚಕ್ರ ವಾಹನದಲ್ಲಿ ಮುಂಭಾಗದಲ್ಲಿ ವರ್ಧನ ಕುಳಿತುಕೊಂಡಿದ್ದ.
ಕಣ್ಣಿಗೆ ಕಾಣಿಸದ ಮಾಂಜಾ ದಾರ ನೇರವಾಗಿ ವರ್ಧನ ಕುತ್ತಿಗೆಗೆ ಬಿಗಿದು ಸ್ಥಳದಲ್ಲಿಯೇ ಅಸುನೀಗಿದ್ದಾನೆ. ಮಾಂಜಾ ಸಂಪೂರ್ಣ ನಿಷೇಧಿಸಲು ಜಿಲ್ಲಾಡಳಿತ ಹಾಗೂ ಪೊಲೀಸರು ಅಗತ್ಯ ಕ್ರಮ ಜರುಗಿಸಬೇಕು ಎಂದು ಬಾಲಕನ ಸಂಬಂಧಿಕರು ಆಗ್ರಹಿಸಿದ್ದಾರೆ.