ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ: ಕಣ್ಣೂರು ಮಠ ಸ್ವಾಮೀಜಿ, ಯುವತಿ ಬಂಧನ | JANATA NEWS
ರಾಮನಗರ : ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹನಿಟ್ರ್ಯಾಪ್ ಮಾಡಿಸಿದ್ದ ಆರೋಪದ ಮೇಲೆ ಮಾಗಡಿ ತಾಲ್ಲೂಕು ಕಣ್ಣೂರು ಮಠದ ಸ್ವಾಮೀಜಿ ಹಾಗೂ ಹನಿಟ್ರ್ಯಾಪ್ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದಾಳೆ ಎಂಬ ಆರೋಪ ಹೊತ್ತ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ಮಠದಲ್ಲಿ ಕೆಲಸ ಮಾಡುತ್ತಿದ್ದ ಅಡ್ವಕೇಟ್ ಮಹದೇವಯ್ಯ ಹಾಗೂ ದೊಡ್ಡಬಳ್ಳಾಪುರ ಮೂಲದ 21 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ಬಂಡೇಮಠದ ಸ್ವಾಮೀಜಿ ಮತ್ತು ಹನಿಟ್ರ್ಯಾಪ್ ಜಾಲ ಹೆಣೆದ ಕಣ್ಣೂರು ಮಠದ ಡಾ ಮೃತ್ಯುಂಜಯ ಸ್ವಾಮೀಜಿ ಹಾಗೂ ಎ2 ನೀಲಾಂಬಿಕೆ, ಎ3 ಮಹದೇವಯ್ಯನನ್ನು ಪೊಲೀಸರು ಬಂಧಿಸಿ ನ್ಯಾಯಾಲಕ್ಕೆ ಒಪ್ಪಿಸಿದ್ದರು. ಇದೀಗ ಕೋರ್ಟ್, ಮೂವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.
ಬಸವಲಿಂಗ ಶ್ರೀಗಳು ಆತ್ಮಹತ್ಯೆಗೂ ಮುನ್ನ ಡೆತ್ನೋಟ್ನಲ್ಲಿ ಮೂರು ಪುಟಗಳಲ್ಲಿ ಆತ್ಮಹತ್ಯೆಗೆ ಕಾರಣ ಬಹಿರಂಗ ಪಡಿಸಿದ್ದರು. ಅದರಲ್ಲಿ ಯುವತಿಯನ್ನು ಬಿಟ್ಟು ಕಣ್ಣೂರು ಶ್ರೀಗಳು ಹನಿಟ್ರ್ಯಾಪ್ ಮಾಡಿಸಿರುವ ಕುರಿತು ಹಾಗೂ ಕಣ್ಣೂರು ಶ್ರೀಗಳ ಷಡ್ಯಂತ್ರ್ಯದ ಬಗ್ಗೆಯೂ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದರು.
ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸುತ್ತಿದ್ದಂತೆಯೇ ಆರೋಪಿ ಕಣ್ಣೂರು ಮಠದ ಮೃತ್ಯುಂಜಯಶ್ರೀ ಹಾಗೂ ಎ3 ಆರೋಪಿ ಮಹದೇವಯ್ಯ ಅವರನ್ನು ಪೊಲೀಸರು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಿದರು. ಇನ್ನು ಎ2 ಆರೋಪಿ ನೀಲಾಂಬಿಕೆಯನ್ನು ಬೆಂಗಳೂರಿನ ಜೈಲಿಗೆ ಶಿಫ್ಟ್ ಮಾಡಲಾಗಿದೆ.