ನೇಕಾರರ ಅಭಿವೃದ್ಧಿಗಾಗಿ ವಿಶೇಷ ನಿಗಮ ಸ್ಥಾಪನೆಗೆ ಶೀಘ್ರ ತೀರ್ಮಾನ | JANATA NEWS
ಬಾಗಲಕೋಟೆ : ನೇಕಾರರ ಅಭಿವೃದ್ಧಿಗಾಗಿ ವಿಶೇಷವಾದ ನೇಕಾರರ ನಿಗಮವನ್ನು ಸ್ಥಾಪಿಸುವ ಬಗ್ಗೆ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನೇಕಾರರಿಗೆ ನೇಕಾರ ಸಮ್ಮಾನ್ ಯೋಜನೆಯಡಿ 5 ಸಾವಿರಕ್ಕೆ ಹೆಚ್ಚಿಸಲಾಗಿದೆ. 51 ಕೋಟಿ ರೂ. ವೆಚ್ಚದಲ್ಲಿ 1.50 ಲಕ್ಷ ನೇಕಾರರಿಗೆ ನೇಕಾರ ಸಮ್ಮಾನ ಯೋಜನೆಯನ್ನು ಡಿಬಿಟಿ ಮೂಲಕ ವಿತರಿಸಲಾಗಿದೆ.
ಮಗ್ಗ ಸ್ಥಾಪಿಸಲು 2 ಲಕ್ಷದವರೆಗೆ ಸಹಾಯಧನ, 5 ಎಚ್ಪಿವರೆಗೆ ವಿದ್ಯುತ್ ವ್ಯವಸ್ಥೆ ನೀಡಲಾಗುತ್ತಿದೆ. ಈ ಭಾಗದಲ್ಲಿ ಜವಳಿ ಪಾರ್ಕ್ ಸ್ಥಾಪಿಸುವ ಬೇಡಿಕೆಯಿದೆ. ರಾಜ್ಯದಲ್ಲಿ 25 ಜವಳಿ ಪಾರ್ಕ್ ಸ್ಥಾಪಿಸುವ ಯೋಜನೆಯಿದ್ದು, ಜವಳಿ ಪಾರ್ಕ್ ಸ್ಥಾಪಿಸುವ ಸ್ಥಳದ ಪಟ್ಟಿಯಲ್ಲಿ ತೇರದಾಳವೂ ಇರಲಿದೆ ಎಂದರು.
ಬಾಗಲಕೋಟೆ ಮತ್ತು ಬಿಜಾಪುರ ಭಾಗದ ಜನರು ಪ್ರಮಾಣಿಕ ಹಾಗೂ ಕಾಯಕವನ್ನು ನಂಬಿರುವ ಜನ. ಕುಡಿಯುವ ನೀರಿನ ವಿಚಾರದಲ್ಲ ಈ ಜಿಲ್ಲೆಗಳಿಗೆ ಅನ್ಯಾಯವಾಗಿರುವುದು ನಿಜ. ಈ ಹಿನ್ನಡೆಯನ್ನು ಸರಿಪಡಿಸಿ, ಈ ಪ್ರದೇಶವೂ ಸಮಗ್ರ ಅಭಿವೃದ್ಧಿ ಆಗಬೇಕೆಂಬ ಉದ್ದೇಶದಿಂದ ಇಂದಿನ ಎಲ್ಲ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಈ ಭಾಗದ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡಲಾಗಿದೆ ಎಂದರು