ಕೋಳಿ ಸಾರಿಗಾಗಿ ಮಗನ ಜೊತೆ ಜಗಳ, ಮಗನನ್ನೇ ಕೊಂದ ಅಪ್ಪ! | JANATA NEWS
ದಕ್ಷಿಣ ಕನ್ನಡ : ಕೋಳಿ ಸಾರಿನ ವಿಚಾರಕ್ಕೆ ತಂದೆ-ಮಗನ ನಡುವೆ ಗಲಾಟೆಯಾಗಿದ್ದು ಮಗನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಗುತ್ತಿಘಾರು ಗ್ರಾಮದಲ್ಲಿ ನಡೆದಿದೆ.
ಏರಣಗುಡ್ಡೆ ಮಾತೃಮಜಲು ನಿವಾಸಿ ಶೀನ ಎಂಬವರ ಮಗ ಶಿವರಾಮ (35) ಮೃತ ವ್ಯಕ್ತಿ. ಶೀನ ಹಾಗೂ ಅವರ ಮಗ ಶಿವರಾಮನಿಗೆ ಕೋಳಿ ಪದಾರ್ಥದ ವಿಚಾರವಾಗಿ ಜಗಳ ಆರಂಭವಾಗಿತ್ತು. ಶಿವರಾಮ ಅವರು ಮದುವೆಯಾಗಿ 9 ವರ್ಷ ಆಗಿದ್ದು, ಆರು ಮತ್ತು ಒಂದು ವರ್ಷದ ಇಬ್ಬರು ಪುಟ್ಟ ಮಕ್ಕಳಿದ್ದಾರೆ.
ಶಿವರಾಮ್ ಮದ್ಯಪಾನ ಮಾಡಿಕೊಂಡು ಮನೆಗೆ ಹಿಂತಿರುಗಿದಾಗ ಊಟದ ಸಮಯದಲ್ಲಿ ಕೋಳಿ ಸಾರು ಖಾಲಿಯಾಗಿರುವ ಬಗ್ಗೆ ಮನೆಯವರ ಜೊತೆ ಜಗಳವಾಡಿದ್ದಾನೆ. ಈ ವೇಳೆ ಶೀನಪ್ಪ ಹಾಗೂ ಶಿವರಾಮ್ ನಡುವೆ ಮಾತಿನ ಚಕಮಕಿ ನಡೆದಿದ್ದು ಪರಸ್ಥಿತಿ ವಿಕೋಪಕ್ಕೆ ತಿರುಗಿ ಮಗನ ತಲೆಗೆ ತಂದೆ ಶೀನಪ್ಪ ದೊಣ್ಣೆಯಿಂದ ಹೊಡೆದಿದ್ದಾರೆ. ತಂದೆ ಕೊಟ್ಟ ಬಲವಾದ ಏಟಿನಿಂದ ತಲೆ ಒಡೆದು ಪುತ್ರ ಶಿವರಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕೊಲೆಯಾದ ವ್ಯಕ್ತಿಯ ಪತ್ನಿ ಕವಿತಾ ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.