ಎದೆಗೆ ಚೂರಿ ಹಾಕಿದಂತಾಗಿದೆ ಎಂದ ಕೈ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ! | JANATA NEWS
ಶಿವಮೊಗ್ಗ : ಇಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿರುವ ಕಾಗೋಡು ತಿಮ್ಮಪ್ಪ ಪುತ್ರಿ ರಾಜನಂದಿನಿ ಅವರು ಬೆಂಗಳೂರಲ್ಲಿ ರಾಜನಂದಿನಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮಾಜಿ ಸಿಎಂ ಬಿಎಸ್ವೈ, ಹಾಲಪ್ಪ ಅವರ ಸಮ್ಮುಖದಲ್ಲಿ ರಾಜನಂದಿನಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಮಗಳು ಬಿಜೆಪಿ ಸೇರಲು ಹೊರಟಿರುವುದು ನನ್ನ ಎದೆಗೆ ಚೂರಿ ಹಾಕಿದಂತಾಗಿದೆ. ಆಕೆ ಇಂತಹ ಕೆಲಸ ಮಾಡಬಾರದಿತ್ತು. ಮಗಳು ಏಕಾಏಕಿ ಬಿಜೆಪಿಯ ಬಾಗಿಲು ತಟ್ಟುತ್ತಿರುವುದು ಎದೆಗೆ ಚೂರಿ ಹಾಕಿದಂತಹ ಅನುಭವ ಆಗಿದೆ. ಇದರ ಪ್ರೇರಣೆ, ತಂತ್ರಗಾರಿಕೆಯಲ್ಲಿ ಹಾಲಿ ಶಾಸಕ ಹಾಲಪ್ಪ ಹರತಾಳು ಅವರ ಪಾತ್ರವೂ ಇರಬಹುದು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ನಾನು ಈ ಬೆಳವಣಿಗೆಯನ್ನು ಕನಸಿನಲ್ಲಿಯೂ ಕಂಡವನಲ್ಲ. ಇದೊಂದು ದೌರ್ಭಾಗ್ಯ. ನಾನು ಈ ಹಿಂದಿನಿಂದಲೂ ಕಾಂಗ್ರೆಸ್ನಲ್ಲಿ ಸ್ಥಿರತೆ ಬದ್ಧತೆ ಕಂಡವನು. ಅದರಲ್ಲಿಯೇ ಸಂತೋಷ, ನೆಮ್ಮದಿಯನ್ನು ಕಂಡವನು. ಈಗಲೂ ನಾನು ಕಾಂಗ್ರೆಸ್ ಪರವಾಗಿಯೇ ಪ್ರಚಾರ ನಡೆಸುತ್ತೇನೆ ಎಂದರು.
ಇದೇ ವೇಳೆಯಲ್ಲಿ ಅವರು ನಾವೆಲ್ಲ ರಾಜಕಾರಣದಲ್ಲಿ ಬದ್ಧತೆ, ಸ್ಥಿರತೆ ಇಟ್ಟುಕೊಂಡು ಬೆಳೆದು ಬಂದವರು. ಆ ಸಂತೋಷ ನನಗೆ ಇದೆ. ಏನೇ ಆಗಲಿ ನಾನು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ನಾನು ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿಯೇ ನಿಲ್ಲುತ್ತೇನೆ ಎಂದು ಕಾಗೋಡು ತಿಮ್ಮಪ್ಪ ಸ್ಪಷ್ಟನೆ ನೀಡಿದರು.