ನನ್ನನ್ನು CM ಮಾಡಬೇಕೆಂದು ನೀವು ಗೆಲ್ಲಿಸಿದಿರಿ, ಆದರೆ.. ಮುಂದೆ ಒಳ್ಳೆ ದಿನಗಳು ಬರಲಿದೆ ಎಂದ ಡಿಕೆಶಿ | JANATA NEWS
ರಾಮನಗರ : ನೀವು ನನ್ನನ್ನು ಮುಖ್ಯಮಂತ್ರಿ ಮಾಡಬೇಕೆಂದು ಗೆಲ್ಲಿಸಿದಿರಿ. ಸೂಕ್ತ ಸಮಯದಲ್ಲಿ ಎಐಸಿಸಿ ನಿರ್ಧಾರ ತೆಗೆದುಕೊಳ್ಳಲಿದೆ, ಒಳ್ಳೆ ದಿನಗಳು ಮುಂದೆ ಬರಲಿದೆ ಎನ್ನುವ ಮೂಲಕ ಪರೋಕ್ಷವಾಗಿ ಮುಂದೆ ಸಿಎಂ ಆಗಲಿದ್ದೇನೆ ಎಂದರು.
ಕನಕಪುರಕ್ಷೇತ್ರದ ಕಲ್ಲಹಳ್ಳಿ, ಶಿವನಹಳ್ಳಿ, ಹಾರೋಹಳ್ಳಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಕೃತಜ್ಞತಾ ಭಾಷಣ ಮಾಡಿದ ಸಂದರ್ಭದಲ್ಲಿ , "ನನ್ನನ್ನು ಮುಖ್ಯಮಂತ್ರಿ ಮಾಡಲು ನೀವು ಬಹಳ ಆಸೆಯಿಂದ ಕೆಲಸ ಮಾಡಿದ್ದಿರಿ" ಸೂಕ್ತ ಸಮಯದಲ್ಲಿ ಎಐಸಿಸಿ ನಿರ್ಧಾರ ತೆಗೆದುಕೊಳ್ಳಲಿದೆ, ಒಳ್ಳೆ ದಿನಗಳು ಮುಂದೆ ಬರಲಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಿತವಚನ ನೀಡಿದ್ದಾರೆ. ಅವರ ತೀರ್ಮಾನಕ್ಕೆ ನಾನು ಬದ್ದನಾಗಿದ್ದೇನೆ ಎನ್ನುವ ಮೂಲಕ ಪರೋಕ್ಷವಾಗಿ ಮುಂದೆ ಸಿಎಂ ಆಗಲಿದ್ದೇನೆ ಎಂದರು.
ಹೈಕಮಾಂಡ್ ನನ್ನನ್ನು ರಾಜ್ಯದ ಉಪಮುಖ್ಯಮಂತ್ರಿ ಮಾಡಿದೆ. ನಾನು ಎಷ್ಟೇ ಎತ್ತರಕ್ಕೆ ಬೆಳೆದ್ರು ಇಲ್ಲಿ ಮಾತ್ರ ನಿಮ್ಮ ಮನೆಮಗ. ನಾನು ಬಹಳ ಚಿಕ್ಕ ವಯಸ್ಸಿನಲ್ಲೇ ರಾಜಕಾರಣಕ್ಕೆ ಬಂದೆ. ನನಗೆ ಯಾವತ್ತೂ ಅಧಿಕಾರದ ಮದ ಇಲ್ಲ, ಮುಂದೆಯೂ ಇರುವುದಿಲ್ಲ.
ಕನಕಪುರ ಮಾದರಿ ಕ್ಷೇತ್ರಯಾಗಬೇಕು. ಮುಖ್ಯಮಂತ್ರಿಗಳಿಗೆ ಈಗಾಗಲೇ ಪತ್ರ ಕೊಟ್ಟಿದ್ದೇನೆ. ನನ್ನ ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜು ಆಗಬೇಕು. ಬಿಜೆಪಿ ಸರ್ಕಾರ ಮೆಡಿಕಲ್ ಕಾಲೇಜು ತಪ್ಪಿಸಿತ್ತು. ಅದನ್ನ ಮತ್ತೆ ತರಲು ನಾನು ಮುಂದಾಗಿದ್ದೇನೆ. ಈಗಾಗಲೇ ಸಿಎಂ ಜೊತೆ ಮಾತನಾಡಿದ್ದೇನೆ. ಅರೋಗ್ಯ, ಶಿಕ್ಷಣ ಬಹಳ ಮುಖ್ಯ. ಎಲ್ಲದಕ್ಕೂ ನಾವು ಬೆಂಗಳೂರಿಗೆ ಹೋಗಲಾಗಲ್ಲ. ಎಲ್ಲರೂ ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸಬೇಕು ಎಂದರು.
ದೇಶ ಹಾಗೂ ರಾಜ್ಯದ ಇತಿಹಾಸದಲ್ಲಿ ಒಂದೇ ದಿನ ಐದು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ತೀರ್ಮಾನ ನಿನ್ನೆ ಕೈಗೊಳ್ಳಲಾಗಿದೆ. ಇದರಿಂದ ಬಿಜೆಪಿ ಹಾಗೂ ಜೆಡಿಎಸ್ ನವರ ದುಃಖ, ದುಗುಡ ಹೆಚ್ಚಾಗಿದ್ದು, ರಾಜ್ಯದ ಜನ ನೋಡುತ್ತಿದ್ದಾರೆ. ನೀವೆಲ್ಲರೂ ನಿಮ್ಮ ಕ್ಷೇತ್ರದಲ್ಲಿ ಫಲಾನುಭವಿಗಳಿಗೆ ಈ ಯೋಜನೆ ಲಾಭ ಸಿಗುವಂತೆ ಮಾಡಬೇಕು ಎಂದರು.
ಗೃಹಲಕ್ಷ್ಮೀ ಯೋಜನೆಗೆ ಜೂನ್ 15 ರಿಂದ ಆನ್ ಲೈನ್ ಹಾಗೂ ಆಫ್ ಲೈನ್ ಅರ್ಜಿ ಕರೆಯಲಾಗುವುದು. ನೀವು ಮನೆ ಮನೆಗೆ ಹೋಗಿ ಅವರ ಮಾಹಿತಿ, ದಾಖಲೆ ಸಂಗ್ರಹಿಸಿ ಅರ್ಜಿ ತುಂಬಿ ಅವರಿಗೆ ಈ ಯೋಜನೆ ಸಿಗುವಂತೆ ಮಾಡಬೇಕು. ಮನೆಯೊಡತಿ ಯಾರು ಎಂದು ಕುಟುಂಬದವರೇ ತೀರ್ಮಾನ ಮಾಡಬೇಕು. ಒಂದು ವೇಳೆ ಮನೆಯೊಡತಿ ಹೆಸರಲ್ಲಿ ಗಂಡಸರ ಬ್ಯಾಂಕ್ ಖಾತೆ ಕೊಟ್ಟರೆ ಆ ಅರ್ಜಿ ಊರ್ಜಿತವಾಗುವುದಿಲ್ಲ. ಹೀಗಾಗಿ ಮಹಿಳೆಯರ ಬ್ಯಾಂಕ್ ಖಾತೆಯನ್ನೇ ಪಡೆಯಿರಿ. ಜೂನ್ 11 ರಿಂದ ಶಕ್ತಿ ಯೋಜನೆ ಜಾರಿಯಾಗಲಿದ್ದು, ಮಹಿಳೆಯರಿಗೆ ಉಚಿತ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಬೆಂಗಳೂರು-ಕನಕಪುರ ರಸ್ತೆ ಶೀಘ್ರದಲ್ಲೇ ಕಾಮಗಾರಿ ಮುಗಿಯಲಿದೆ. ಕ್ಷೇತ್ರದಲ್ಲಿ ಎಲ್ಲಾ ರೀತಿಯ ಬದಲಾವಣೆಯಾಗುತ್ತದೆ. ನೀವು ಯಾರೂ ನಿಮ್ಮ ಆಸ್ತಿಗಳನ್ನ ಮಾರಿಕೊಳ್ಳಬೇಡಿ. ಮುಂದೆ ಕ್ಷೇತ್ರದ ಜನರಿಗೆ ಉತ್ತಮ ಭವಿಷ್ಯವಿದೆ. ಮುಂದೆ ನಿಮ್ಮ ಆಸ್ತಿಗೆ ಒಳ್ಳೆಯ ಬೆಲೆ ಬರುತ್ತದೆ. ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆಗೆ ಹೆಚ್ಚು ಒತ್ತು ಸಿಗಲಿದೆ. ಕ್ಷೇತ್ರದ ಜನತೆಗೆ ಮುಂದೆ ಆರ್ಥಿಕ ಶಕ್ತಿ ಸಿಗಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಈ ಚುನಾವಣೆಯಲ್ಲಿ ನಾನು ಹೆಚ್ಚು ಪ್ರಚಾರ ಮಾಡದೇ ಇದ್ದರೂ ನಿಮಗೆ ನೀವೇ ಅಭ್ಯರ್ಥಿಯಾಗಿ ಮತ ನೀಡಿದ್ದೀರಿ. 1,23,000 ಮತಗಳ ಅಂತರದ ದಾಖಲೆಯ ಜಯ ತಂದುಕೊಟ್ಟಿದ್ದೀರಿ. ಮುಂದಿನ ದಿನಗಳಲ್ಲಿ ಕನಕಪುರ ಹಾಗೂ ರಾಮನಗರ ಜಿಲ್ಲೆಗೆ ಪ್ರತಿ ವಾರ ಒಂದು ದಿನ ಮೀಸಲಿಡುತ್ತೇನೆ. ಇಲ್ಲಿ ಪ್ರತ್ಯೇಕ ಕಚೇರಿ ಆರಂಭಿಸುತ್ತೇನೆ. ನಾನು ನಿಮ್ಮನ್ನು ಭೇಟಿ ಮಾಡಿ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದರು.
ನಾವು ಗೆದ್ದಿದ್ದೇವೆಂದು ಇತರ ಪಕ್ಷಗಳ ಮೇಲೆ ದಬ್ಬಾಳಿಕೆ ಬೇಡ. ಜೆಡಿಎಸ್ ಹಾಗೂ ಬಿಜೆಪಿಯವರನ್ನು ಅಣಕಿಸುವುದು ಬೇಡ. ಎಲ್ಲರೂ ಶಾಂತಿಯಿಂದ ವರ್ತಿಸಬೇಕು ಎಂದರು. ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆ ನಡೆಯಲಿದ್ದು, ಅದಕ್ಕೆ ನೀವು ಸಿದ್ಧರಾಗಬೇಕು. ಉಳಿದಿರುವ ಬೇರೆ ಪಕ್ಷದ ನಾಯಕರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದರು.