ಹಿಂದೂ ಮುಖಂಡರ ಮೇಲೆ ಪ್ರಚೋದನಕಾರಿ ಭಾಷಣ ಕೇಸ್; ಹೋರಾಟ ಹತ್ತಿಕ್ಕುವ ಪ್ರಯತ್ನ - ಶಾಸಕ ಸುವರ್ಣ | JANATA NEWS
ಉಡುಪಿ : ವೀಡಿಯೋ ಪ್ರಕರಣದ ಬಗ್ಗೆ ಕೇಸು ದಾಖಲಿಸಲು ಮೀನಾಮೇಷ ಎಣಿಸಿ ವಿಳಂಬವಾಗಿ 8 ದಿನಗಳ ಬಳಿಕ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸ್ ಇಲಾಖೆ ಹಿಂದೂ ಮುಖಂಡರ ವಿರುದ್ಧ ತರಾತುರಿಯಲ್ಲಿ ಸುಮೋಟೋ ಕೇಸ್ ದಾಖಲಿಸುವಲ್ಲಿ ವಿಶೇಷ ಆಸಕ್ತಿ ವಹಿಸಿದೆ, ಎಂದು ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಹಿಂದೂ ಮುಖಂಡರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಸ್ವಯಂಪ್ರೇರಿತ ಕೇಸ್ ದಾಖಲಾಗಿರುವ ಕ್ರಮಕ್ಕೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ವೀಡಿಯೋ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಹಿಂದೂ ಮುಖಂಡರಾದ ಶರಣ್ ಪಂಪ್ ವೆಲ್, ದಿನೇಶ್ ಮೆಂಡನ್ ಹಾಗೂ ಬಿಜೆಪಿ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ ವಿರುದ್ಧ ಸುಮೋಟೋ ಕೇಸ್ ದಾಖಲಿಸಿರುವ ಪೊಲೀಸ್ ಇಲಾಖೆಯ ಕ್ರಮಕ್ಕೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಾಗಿ ಪೋಲಿಸ್ ಇಲಾಖೆ ಕೆಲಸ ನಿರ್ವಹಿಸುತ್ತಿದ್ದು, ಪ್ರಕರಣದ ಆರಂಭದ ದಿನದಿಂದಲೂ ಸರಕಾರ ನಿರಂತರವಾಗಿ ಪೋಲಿಸ್ ಇಲಾಖೆಯ ಮೇಲೆ ಒತ್ತಡ ತರುತ್ತಿದ್ದು ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಸುತ್ತಿದೆ. ಉಡುಪಿಯಲ್ಲಿ ನಿನ್ನೆ ನಡೆದ ಪ್ರತಿಭಟನೆಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾಗಿ ಪ್ರಕರಣದ ವಿರುದ್ಧ ಜನಕ್ರೋಶ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಹತಾಶರಾಗಿರುವ ರಾಜ್ಯ ಸರ್ಕಾರ ಪೋಲಿಸ್ ಇಲಾಖೆಯ ಮೂಲಕ ಹಿಂದೂ ಮುಖಂಡರ ಮೇಲೆ ಕೇಸ್ ದಾಖಲಿಸುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ತೊಡಗಿದೆ. ವೀಡಿಯೋ ಪ್ರಕರಣದ ಬಗ್ಗೆ ಕೇಸು ದಾಖಲಿಸಲು ಮೀನಾಮೇಷ ಎಣಿಸಿ ವಿಳಂಬವಾಗಿ 8 ದಿನಗಳ ಬಳಿಕ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸ್ ಇಲಾಖೆ ಹಿಂದೂ ಮುಖಂಡರ ವಿರುದ್ಧ ತರಾತುರಿಯಲ್ಲಿ ಸುಮೋಟೋ ಕೇಸ್ ದಾಖಲಿಸುವಲ್ಲಿ ವಿಶೇಷ ಆಸಕ್ತಿ ವಹಿಸಿದೆ. ರಾಜ್ಯ ಸರ್ಕಾರ ಜಿಹಾದಿ ಶಕ್ತಿಗಳ ಓಲೈಕೆಗಾಗಿ ಹಿಂದೂ ಮುಖಂಡರ ವಿರುದ್ಧ ಕೇಸ್ ದಾಖಲಿಸಿದ್ದು, ಇದರಿಂದ ಯಾವೊಬ್ಬ ಹಿಂದೂ ಕಾರ್ಯಕರ್ತ ಧೃತಿಗೆಡದೆ ಸಂತ್ರಸ್ಥ ವಿದ್ಯಾರ್ಥಿನಿಯರ ರಕ್ಷಣೆಗೆ ಸದಾ ಜೊತೆ ನಿಲ್ಲಲಿದ್ದಾರೆ, ಎಂದು ಯಶಪಾಲ್ ಸುವರ್ಣ ಟ್ವೀಟ್ ಮಾಡಿದ್ದಾರೆ.