ಮೈಸೂರು ಯುವ ದಸರಾ ಆರಂಭ: ಯುವ ದಸರಾ ಉದ್ಘಾಟನೆ ಮಾಡಿದ ಪಿವಿ ಸಿಂಧು | Janata news
ಮೈಸೂರು : ದಸರಾ ಮಹೋತ್ಸವ ಪ್ರಯುಕ್ತ ಮಹಾರಾಜ ಕಾಲೇಜು ಮೈದಾನದಲ್ಲಿ ಅ.1 ರಿಂದ 6 ರವರೆಗೆ ಯುವ ದಸರಾ ಕಾರ್ಯಕ್ರಮವನ್ನು ಆಯೋಜಿಸಿದ್ದು, ಉದ್ಘಾಟನೆ ಮಾಡಲು ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಮೈಸೂರಿಗೆ ಆಗಮಿಸಿದ್ದಾರೆ. ತಮ್ಮ ತಂದೆ-ತಾಯಿಯೊಂದಿಗೆ ಆಗಮಿಸಿರುವ ಸಿಂಧು ಅವರಿಗೆ ನಗರದ ರಾಡಿಷನ್ ಬ್ಲೂ ಹೊಟೇಲ್ನಲ್ಲಿ ಸಾಂಪ್ರದಾಯಿಕ ಸ್ವಾಗತ ಮಾಡಲಾಯಿತು. ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನ ಮಾಡಿ ಹೂಗುಚ್ಛ ನೀಡಿ ಸಂಸದ ಪ್ರತಾಪ್ ಸಿಂಹ ಆಹ್ವಾನಿಸಿದ್ದಾರೆ.
ಯುವ ದಸರಾ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಪ್ರತಿನಿತ್ಯ ಕಾರ್ಯಕ್ರಮವು ನಿಗದಿತ ಸಮಯಕ್ಕೆ ಅಂದರೆ ಸಂಜೆ 5.30ಕ್ಕೆ ಆರಂಭವಾಗಲಿದೆ ಹಾಗೂ ರಾತ್ರಿ 10.30ಕ್ಕೆ ಮುಗಿಯಲಿವೆ ಎಂದು ದಸರಾ ಉಪ ವಿಶೇಷಾಧಿಕಾರಿಯಾದ ಎಸ್ಪಿ ರಿಷ್ಯಂತ್ ತಿಳಿಸಿದರು.
ಮೊದಲನೇ ದಿನ ಕಲ್ಕತ್ತಾದ ಖ್ಯಾತ ಗಾಯಕಿ ರಾನು ಮಂಡಲ್ ಅವರು ಆಗಮಿಸಲಿದ್ದು, ಅವರಿಗೆ ಗೌರವ ಸಮರ್ಪಣೆ ಕೂಡ ನಡೆಯಲಿದೆ. ಬಾಲಿವುಡ್ ಗಾಯಕ ಗುರು ರಾಂಧವ ಅವರಿಂದ ಸಂಗೀತ ರಸಮಂಜರಿ ನಡೆಯಲಿದೆ ಎಂದರು.
ಈ ಬಾರಿ ಹಲವಾರು ಗಾಯಕರನ್ನು ಆಹ್ವಾನಿಸಿದ್ದು, ಬಾಲಿವುಡ್ ಗಾಯಕರಾದ ಮೋಹಿತ್ ಚೌಹಾಣ್, ಮನಾಲಿ ಠಾಕೂರ್, ಪ್ರೀತಮ್ ಚರ್ಕವರ್ತಿ ಹಾಗೂ ಮೈಸೂರು ಗಾಯಕಿ ಸಂಗೀತ ರವೀಂದ್ರನಾಥ್ ತಮ್ಮ ಗಾಯನದಿಂದ ಪ್ರೇಕ್ಷಕರ ಮನಗೆಲ್ಲಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಹಲವಾರು ತಾರೆಯರು ಭಾಗಿಯಾಗುವರು.
ನಟರಾದ ದರ್ಶನ್, ರಕ್ಷಿತ್ ಶೆಟ್ಟಿ, ಸಾಧುಕೋಕಿಲ, ಶರಣ್, ಸೃಜನ್, ಡಾಲಿ ಧನಂಜಯ್, ವಶಿಷ್ಟ, ದಿಗಂತ್, ನಟಿಯರಾದ ಐಂದಿತಾ ರೈ, ಹರ್ಷಿಕಾ ಪೂಣಚ್ಚ, ಮಾನ್ವಿತಾ ಹರೀಶ್, ಚಂದನ್ ಶೆಟ್ಟಿಹಾಗೂ ಗಾಯಕ ಸಂಚಿತ್ ಹೆಗಡೆ ಕೂಡ ಯುವ ದಸರಾ ಕಾರ್ಯಕ್ರಮದಲ್ಲಿ ಯುವ ಮನಸ್ಸುಗಳನ್ನು ಸಂತಸಗೊಳಿಸಲು ಬರಲಿದ್ದಾರೆ ಎಂದು ಅವರು ವಿವರಿಸಿದರು.