ದರ್ಶನ್ ಅಭಿಮಾನಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಚಾರ: ಸಿನಿಮಾ ಸೆಟ್ ನಲ್ಲಿದ್ದ ಜಗ್ಗೇಶ್ಗೆ ದರ್ಶನ್ ಅಭಿಮಾನಿಗಳು ಮುತ್ತಿಗೆ! | Filmz news
: ನಟ ಜಗ್ಗೇಶ್, ದರ್ಶನ್ ಅಭಿಮಾನಿಗಳ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು ಇದರಿಂದ ಆಕ್ರೋಶಗೊಂಡಿರುವ ದರ್ಶನ್ ಅಭಿಮಾನಿಗಳು, ಜಗ್ಗೇಶ್ ನಟನೆಯ ತೋತಾಪುರಿ ಚಿತ್ರದ ಶೂಟಿಂಗ್ ಸ್ಪಾಟ್ ಗೆ ತೆರಳಿ ಜಗ್ಗೇಶ್ ಗೆ ಮುತ್ತಿಗೆ ಹಾಕಿದ್ದಾರೆ. ಅಲ್ಲದೇ ತಮ್ಮ ವಿರುದ್ಧ ಮಾತನಾಡಿದ್ದಕ್ಕೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ಸ್ಪೆಕ್ಟರ್ ವಿಕ್ರಂ ಚಿತ್ರದ ನಿರ್ಮಾಪಕ ವಿಖ್ಯಾತ್ ಜೊತೆಗೆ ಫೋನಿನಲ್ಲಿ ಮಾತನಾಡಬೇಕಾದಾಗ, ದರ್ಶನ್ ಅವ್ರ ಅಭಿಮಾನಿಗಳ ತರ ತಲೆ ಮಾಂಸ ಕೇಳುವವರಲ್ಲ ಎಂಬ ಆಡಿಯೋವೊಂದು ದರ್ಶನ್ ಮತ್ತು ಅವ್ರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತ್ತು. ಈ ವಿಚಾರವಾಗಿ ಇಂದು ಮೈಸೂರಿನಲ್ಲಿ ಜಗ್ಗೇಶ್ಗೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದಾರೆ.
ಸದ್ಯ ಜಗ್ಗೇಶ್ ಮೈಸೂರಿನ ಬನ್ನೂರು ಸಮೀಪದ ಅತ್ತಳ್ಳಿ ಬಳಿ ತೋತಾಪುರಿ ಸಿನಿಮಾ ಶೂಟಿಂಗ್ನಲ್ಲಿ ಇರಬೇಕಾದರೆ, ಅಭಿಮಾನಿಗಳು ಜಗ್ಗೇಶ್ ಅವ್ರನ್ನ ಸುತ್ತುವರೆದು ತರಾಟೆಗೆ ತೆಗೆದುಕೊಂಡಿದ್ದಾರೆ. ದರ್ಶನ್ ಮತ್ತು ಅಭಿಮಾನಿಗಳ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಿದ್ರಿ ಎಂದು ಪ್ರಶ್ನೆ ಮಾಡಿದ್ದಾರೆ.
ಈ ವೇಳೆ ಜಗ್ಗೇಶ್, ನಾನು ಯಾವುದೇ ರೀತಿ ಕೆಟ್ಟದಾಗಿ ಮಾತನಾಡಿಲ್ಲ. ಇದರ ಹಿಂದೆ ದೊಡ್ಡ ಹುನ್ನಾರ ನಡೆದಿದೆ. ಆ ಆಡಿಯೋ ಕ್ಲಿಪ್ನಲ್ಲಿರುವ ಧ್ವನಿ ತನ್ನದಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ.
ತಾನು ದರ್ಶನ್ ಹೆಸರಿನ ವೆಬ್ ಡಿಸೈನರ್ ಬಗ್ಗೆ ಮಾತನಾಡಿದ್ದು, ಅದನ್ನು ಎಡಿಟ್ ಮಾಡಿ ಈ ರೀತಿ ಆರೋಪ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಆಡಿಯೋ ಎಡಿಟ್ ಮಾಡಿ ನನ್ನ ವಿರುದ್ಧ ಅಪಪ್ರಚಾರ ಮಾಡಲಾಗಿದೆ ಎಂದು ಹೇಳಿದ್ದಾರೆ. ಆದರೂ ಪಟ್ಟು ಬಿಡದ ದರ್ಶನ್ ಅಭಿಮಾನಿಗಳು ಕ್ಷಮೆ ಯಾಚಿಸುವಂತೆ ಒತ್ತಾಯಿಸಿದ್ದಾರೆ. ಒತ್ತಡಕ್ಕೆ ಮಣಿದ ಜಗ್ಗೇಶ್ ಕೊನೆಗೂ ದರ್ಶನ್ ಅಭಿಮಾನಿಗಳ ಕ್ಷಮೆ ಕೋರಿದ್ದಾರೆ.
ನನ್ನ ಮತ್ತು ದರ್ಶನ್ ಗೆಳೆತನದ ಮಧ್ಯೆ ಯಾರೋ ಹುಳಿ ಹಿಂಡುತ್ತಿದ್ದಾರೆ. ನಾನು ದರ್ಶನ್ ಬಗ್ಗೆ ಎಲ್ಲೂ ಕೆಟ್ಟದಾಗಿ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಷ್ಟಕ್ಕೂ ಜಗ್ಗೇಶ್ ಆಡೀಯೋದಲ್ಲಿ ಹೇಳಿದ್ದೇನು?:
ನಮ್ಮಹತ್ರ ಇರೋರೆಲ್ಲ ಹಾರ್ಡ್ ವರ್ಕ್ ಮಾಡೋರು. ದರ್ಶನ್ ಅಭಿಮಾನಿಗಳ ಥರ ತಲೆ ಮಾಂಸ ಕೇಳೋರು, ನೂರು ಕುರಿ ಕಳಿಸಿ ಅಂತ ಕೇಳೋರು ಯಾರೂ ಇಲ್ಲ ಎಂದು ದರ್ಶನ್ ಅಭಿಮಾನಿಗಳ ಬಗ್ಗೆ ಅವಹೇಳನಕಾರಿಯಾಗಿ ಜಗ್ಗೇಶ್ ಹೇಳಿದ್ದಾರೆ ಎಂಬ ಆಡಿಯೋ ಭಾರಿ ವೈರಲ್ ಆಗಿದೆ.