ಪ್ರಧಾನಿ ಮೋದಿ ಭೇಟಿ ಮಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ | ಜನತಾ ನ್ಯೂಸ್
ನವದೆಹಲಿ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾದರು. ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ವಿಜಯ ಸಾಧಿಸಿದ ಬಳಿಕ ಮಮತಾ ಅವರು ಪ್ರಧಾನಮಂತ್ರಿಯವರನ್ನು ಇದೇ ಮೊದಲ ಭಾರಿಗೆ ಭೇಟಿ ಮಾಡುತ್ತಿದ್ದಾರೆ.
ಸಭೆಯಲ್ಲಿ, ಮಮತಾ ಕೋವಿಡ್-19 ರ ವಿಷಯ ಮತ್ತು ಬಂಗಾಳದಲ್ಲಿ ಹೆಚ್ಚಿನ ಲಸಿಕೆಗಳ ಅಗತ್ಯವನ್ನು ಎತ್ತಿದ್ದಾರೆ ಎನ್ನಲಾಗಿದೆ. "ಇದು ಇಂದು ಪ್ರಧಾನ ಮಂತ್ರಿಯೊಂದಿಗಿನ ಸೌಜನ್ಯದ ಸಭೆಯಾಗಿದೆ. ಸಭೆಯಲ್ಲಿ ನಾನು ಕೋವಿಡ್ ವಿಷಯವನ್ನು ಎತ್ತಿದ್ದೇನೆ ಮತ್ತು ರಾಜ್ಯದಲ್ಲಿ ಹೆಚ್ಚಿನ ಲಸಿಕೆಗಳು, ಔಷಧಿಗಳ ಅವಶ್ಯಕತೆಯಿದೆ. ರಾಜ್ಯದ ಹೆಸರಿನ ಬದಲಾವಣೆಯ ಬಾಕಿ ಇರುವ ಸಮಸ್ಯೆಯನ್ನು ಸಹ ನಾನು ಎತ್ತಿದ್ದೇನೆ" ಎಂದು ಮಮತಾ ಹೇಳಿದರು.
ಇದಕ್ಕೂ ಮುಂಚೆ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ನವದೆಹಲಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕಮಲ್ ನಾಥ್ ಮತ್ತು ಆನಂದ್ ಶರ್ಮಾ ಅವರನ್ನು ಭೇಟಿಯಾದರು. ಸಭೆಯ ನಂತರ, ಕಮಲ್ ನಾಥ್ ಅವರು ಯಾವುದೇ ಕಾರ್ಯತಂತ್ರವನ್ನು ಚರ್ಚಿಸಲಿಲ್ಲ ಮತ್ತು ಬಂಗಾಳ ಚುನಾವಣೆಯಲ್ಲಿ ಅವರು ಗೆದ್ದಿದ್ದನ್ನು ಮಾತ್ರ ಅಭಿನಂದಿಸಿರುವುದಾಗಿ, ಎಂದಿದ್ದಾರೆ.
"ನಾವು ಯಾವುದೇ ಕಾರ್ಯತಂತ್ರವನ್ನು ಚರ್ಚಿಸಿಲ್ಲ. ಅದನ್ನು ನಮ್ಮ ಪಕ್ಷದ ಮುಖಂಡರು ಚರ್ಚಿಸಲಿದ್ದಾರೆ. ಪ್ರಸ್ತುತ ಪರಿಸ್ಥಿತಿ ಮತ್ತು ಹೆಚ್ಚುತ್ತಿರುವ ಬೆಲೆಗಳ ಬಗ್ಗೆ ನಾವು ಚರ್ಚಿಸಿದ್ದೇವೆ" ಎಂದು ಕಮಲನಾಥ್ ಹೇಳಿದರು.
ಪ್ರಧಾನ ಮಂತ್ರಿಯನ್ನು ಭೇಟಿಯಾದ ನಂತರ ಪೆಗಾಸಸ್ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ವಿಚಾರಣೆ ನಡೆಸಬೇಕೆಂದು ಅವರು ಒತ್ತಾಯಿಸಿದರು. "ಪೆಗಾಸಸ್ ವಿಷಯದ ಬಗ್ಗೆ ಪ್ರಧಾನ ಮಂತ್ರಿ ಸರ್ವಪಕ್ಷ ಸಭೆ ಕರೆಯಬೇಕು. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ನಡೆಸಬೇಕು" ಎಂದು ಅವರು ಹೇಳಿದರು.
ಆಡಳಿತಾರೂಡ ಎನ್ಡಿಎ ಹಾಗೂ ಪ್ರಧಾನಿ ಮೋದಿ ಎದುರಿಸಲು ಪ್ರತಿಪಕ್ಷಗಳಲ್ಲಿನ ಐಕ್ಯತೆಯ ತಂತ್ರಗಾರಿಕೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ತನ್ನದೇ ಆದ ಆಕಾರವನ್ನು ಪಡೆಯಲಿದೆ, ಎಂದು ಹೇಳಿದರು.