ಒಂದೇ ಕುಟುಂಬದ ಐದು ಜನರ ಆತ್ಮಹತ್ಯೆ, ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ | ಜನತಾ ನ್ಯೂಸ್
ಬೆಂಗಳೂರು : ಹೆಲ್ಲೇಗೆರೆ ಶಂಕರ್ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ.
ಮಾಗಡಿ ರಸ್ತೆ ಬ್ಯಾಡರಹಳ್ಳಿ ಸಮೀಪದ ತಿಗಳರಪಾಳ್ಯದಲ್ಲಿ ವಾಸವಾಗಿದ್ದ ವಾರ ಪತ್ರಿಕೆ ಸಂಪಾದಕ ಹಲ್ಲೇಗೆರೆ ಶಂಕರ್ ಅವರ ಪತ್ನಿ ಭಾರತಿ (50), ಮಕ್ಕಳಾದ ಸಿಂಚನಾ (34), ಸಿಂಧುರಾಣಿ (31) ಮತ್ತು ಮಧುಸಾಗರ್ (27) ಹಾಗೂ ಸಿಂಚನಾಳ 9 ತಿಂಗಳ ಮಗು ಮೃತಪಟ್ಟಿದೆ. 2 ವರ್ಷದ ಪ್ರೇಕ್ಷಾ ಪವಾಡ ಸದೃಶ ಬದುಕುಳಿದಿದ್ದಾಳೆ. ತಾಯಿ ಮತ್ತು ಮಕ್ಕಳ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, 9 ತಿಂಗಳ ಮಗು ಮಲಗಿದ್ದಲ್ಲೇ ಸತ್ತ ಸ್ಥಿತಿಯಲ್ಲಿತ್ತು. ಮಗುವಿನ ಕುತ್ತಿಗೆ ಕೊಳೆತ ಸ್ಥಿತಿಯಲ್ಲಿದ್ದು, ಆ ಭಾಗದಲ್ಲಿ ಮಾತ್ರ ಹುಳುಗಳು ಬಿದ್ದಿದ್ದವು.
ಶಂಕರ್ ಕುಟುಂಬಕ್ಕೆ ಹಣ, ಆಸ್ತಿ-ಅಂತಸ್ತು ಯಾವುದಕ್ಕೂ ಕೊರತೆ ಇರಲಿಲ್ಲ. ಶಂಕರ್ರ ಮಕ್ಕಳಾದ ಸಿಂಚನಾ, ಸಿಂಧುರಾಣಿ ಮತ್ತು ಮಧುಸಾಗರ್ ಮೂವರು ಉತ್ತಮ ವಿದ್ಯಾಭ್ಯಾಸ ಮಾಡಿದ್ದರು. ಇಬ್ಬರು ಹೆಣ್ಣುಮಕ್ಕಳನ್ನು ಐಎಎಸ್ ಕೋಚಿಂಗ್ಗೂ ಶಂಕರ್ ಕಳುಹಿಸಿದ್ದರು. ಮಗ ಮಧುಸಾಗರ್ ಹೆಸರಲ್ಲಿ ಬಾರ್ ತೆರೆಯಲು ಕೋಟ್ಯಂತರ ರೂಪಾಯಿ ವ್ಯಯಿಸಿ ಲೈಸನ್ಸ್ ಕೂಡ ಪಡೆದಿದ್ದರು. ಇಷ್ಟೆಲ್ಲ ಅನುಕೂಲತೆ ಇದ್ದರೂ ಮನೆಯಲ್ಲಿ ಆ ಒಂದು ಕಾರಣಕ್ಕೆ ಮನಸ್ತಾಪ ಆಗುತ್ತಲೇ ಇತ್ತಂತೆ. ಅದೇ ಕಾರಣಕ್ಕೆ ಶಂಕರ್ ಪತ್ನಿ ಭಾರತಿ, ಮೂವರು ಮಕ್ಕಳು, ಸಿಂಧುರಾಣಿಯ 9 ತಿಂಗಳ ಮಗು ಬಲಿಯಾಗಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ ಆತ್ಮಹತ್ಯೆಗೆ ಶರಣಾದ ಕುಟುಂಬಸ್ಥರ ಅಂತ್ಯ ಸಂಸ್ಕಾರವನ್ನು ಕುಟುಂಬದ ಮಾಲೀಕ ಶಂಕರ್ ಸುಮನಹಳ್ಳಿ ಚಿತಾಗಾರದಲ್ಲಿ ನಡೆಸಿದರು. ಈ ವೇಳೆ ಮನೆ ಮಾಲೀಕ ಶಂಕರ್ ಹೆಂಡತಿಯ ಹಠದಿಂದ ಹೇಗೆ ಕುಟುಂಬವೇ ಹಾಳಾಯಿತು ಎಂದು ಕಣ್ಣೀರಿಟ್ಟ ಘಟನೆ ನಡೆಯಿತು.
ಅದೃಷ್ಟದಿಂದ ಪಾರಾದ ಮೊಮ್ಮಗು ಹೊರತು ಪಡಿಸಿ ಇಡೀ ಕುಟುಂಬಸ್ಥರನ್ನೇ ಕಳೆದುಕೊಂಡ ಶಂಕರ್ ರೋದನೆ ಮುಗಿಲು ಮುಟ್ಟಿತು. ಇಡೀ ಜೀವನ ಹೆಂಡತಿ ಮಕ್ಕಳು ಚೆನ್ನಾಗಿ ಇರಲಿ ಎಂದು ಕಷ್ಟ ಪಟ್ಟೆ. ಆದರೆ, ಈ ಸೌಧವನ್ನೇ ಹೆಂಡತಿ ಭಾರತಿ ಧ್ವಂಸ ಮಾಡಿದಳು. ನಿನ್ನ ಮಾನ ಮರ್ಯಾದೆ ಕಳಿತೀನಿ. ಸುಮ್ನೆ ಬಿಡಲ್ಲ ಅಂತಿದ್ದಳು ಸಂಸಾರ ಹಾಳು ಮಾಡಿ ಬಿಟ್ಟಳು. ಹಗಲು ರಾತ್ರಿ ಎನ್ನದೇ ದುಡಿದೆ. ಎಲ್ಲಾ ನಿರ್ನಾಮ ಮಾಡಿಬಿಟ್ಟರು ಎಂದು ಸಂಬಂಧಿಕರ ಬಳಿ ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆಯಿತು.
ಇಂಜಿನಿಯರಿಂಗ್ ಪದವೀಧರೆ ಸಿಂಚನಾಳನ್ನು 6 ವರ್ಷದ ಹಿಂದೆ ಪ್ರವೀಣ್ ಎಂಬಾತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಜಕ್ಕೂರು ಬಳಿ ಮನೆ ಮಾಡಿಕೊಂಡಿದ್ದ ಪ್ರವೀಣ್, ತಂದೆ-ತಾಯಿ, ಪತ್ನಿ ಜತೆ ವಾಸವಿದ್ದ. ಸಿಂಚನಾಗೆ ಅತ್ತೆ-ಮಾವನ ಜತೆ ಇರೋಕೆ ಇಷ್ಟ ಇರಲಿಲ್ಲ. ಬಾಣಂತನಕ್ಕೆ ಬಂದ ಸಿಂಚನಾ ವಾಪಸ್ ಗಂಡನ ಮನೆಗೆ ಹೋಗಿರಲಿಲ್ಲ. ಪತ್ನಿ ಜತೆ ಪ್ರವೀಣ್ ಮೊಬೈಲ್, ಇ-ಮೇಲ್ ಮೂಲಕ ಸಂಪರ್ಕದಲ್ಲಿದ್ದ. ಬೇರೆ ಮನೆ ಮಾಡಿದ್ರೆ ಬರ್ತೀನಿ ಅಂತಿದ್ಳಂತೆ ಸಿಂಚನಾ.
ಅತ್ತ ಮತ್ತೊಬ್ಬ ಮಗಳು ಸಿಂಧುರಾಣಿಯ ವಿವಾಹ 2020ರ ಫೆಬ್ರವರಿಯಲ್ಲಿ ಆಂಧ್ರದ ಗೋರಂಟ್ಲಾ ನಿವಾಸಿ ಶ್ರೀಕಾಂತ್ ಜತೆ ಆಗಿತ್ತು. ಬೆಂಗಳೂರಿನ ಕಾಡುಗೋಡಿಯಲ್ಲಿ ದಂಪತಿ ವಾಸವಿದ್ದರು. ಹೆರಿಗೆಗೆ ತವರು ಮನೆಗೆ ಬಂದಿದ್ದ ಸಿಂಧುರಾಣಿ ಇಲ್ಲೇ ಇದ್ದಳು. ಇದೇ ತಿಂಗಳು ಮಗನ ನಾಮಕರಣ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.
20 ದಿನದ ಹಿಂದೆ ಸಿಂಧು ಆತ್ಮಹತ್ಯೆಗೆ ಯತ್ನಿಸಿದ್ದಳು. ಬೀಗರ ಮನೆಯವರನ್ನ ಹೆದರಿಸಿ ತನ್ನ ಕಂಟ್ರೋಲ್ನಲ್ಲಿ ಇಟ್ಟುಕೊಳ್ಳಲು ಕೈಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸುವಂತೆ ತಾಯಿ ಭಾರತಿಯೇ ಮಗಳ ತಲೆ ಕೆಡಿಸಿದ್ದಳಂತೆ. ಇದನ್ನ ಪ್ರಶ್ನಿಸಿದ ಶಂಕರ್ ಮೇಲೆಯೇ ಪತ್ನಿ ಮತ್ತು ಮಕ್ಕಳು ಹಲ್ಲೆಗೂ ಮುಂದಾಗಿದ್ದರಂತೆ.
ಗಂಡನ ಮನೆಗೆ ಹೋಗುವಂತೆ ಶಂಕರ್ ಹೇಳಿದ್ದರೂ ಪತ್ನಿ ಭಾರತಿ ಮಾತ್ರ ಮಗಳು ಎಲ್ಲಿಯೂ ಹೋಗೋದು ಬೇಡ, ಇಲ್ಲಿಯೇ ಇರಲಿ ಎಂದು ಪಟ್ಟು ಹಿಡಿದಿದ್ದಳು. ಅದರಂತೆ ಹಿರಿಯ ಪುತ್ರಿ ಇಲ್ಲಿಯೇ ಉಳಿದುಕೊಂಡಿದ್ದಳು. ಮಗಳ ಜೀವನ ಹೀಗಾಯ್ತಲ್ಲ ಅನ್ನೋ ನೋವು ಶಂಕರ್ಗೆ ಕಾಡತೊಡಗಿತ್ತು.
ಎರಡನೇ ಪತ್ರಿ ಸಿಂಧೂರಾಣಿಯ 9 ತಿಂಗಳ ಕಂದಮ್ಮನ ನಾಮಕರಣ ಮತ್ತು ಕಿವಿ ಚುಚ್ಚಿಸುವ ವಿಚಾರವಾಗಿ ಹಲ್ಲೇಗೇರೆ ಶಂಕರ್ ಮತ್ತು ಮಗಳು ಸಿಂಧೂರಾಣಿ ಪತಿಯ ಕುಟುಂಬದ ನಡುವೆ ಸಾಕಷ್ಟು ಮೈಮನಸ್ಸು ಇತ್ತು. ಇದೇ ವಿಚಾರ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿತ್ತು.
ಹೆಣ್ಣುಮಕ್ಕಳು ಗಂಡನ ಮನೆಗೆ ಹೋಗಲಿ ಅಂತ ಶಂಕರ್ ಪದೇ ಪದೇ ಹೇಳುತ್ತಿದ್ದರು. ಆದರೆ ಶಂಕರ್ ಪತ್ನಿ ಭಾರತಿ ಮಾತ್ರ ಮಕ್ಕಳು ಮನೆಯಲ್ಲೇ ಇರಲಿ, ತೊಂದರೆ ಏನು ಎಂದು ಹೇಳತೊಡಗಿದ್ದರು. ಇದು ಶಂಕರ್ ಹಾಗೂ ಪತ್ನಿ, ಪುತ್ರಿಯರ ನಡುವಿನ ಮನಸ್ತಾಪಕ್ಕೆ ಕಾರಣವಾಗಿತ್ತು ಎನ್ನಲಾಗ್ತಿದೆ.
ಪ್ರಕರಣದ ಪ್ರಾಥಮಿಕ ವರದಿಯಲ್ಲಿ ಕುಟುಂಬಸ್ಥರೆಲ್ಲಾ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ. ಮೊದಲು ತಾಯಿ ಆ ಬಳಿಕ ಇಬ್ಬರು ಹೆಣ್ಣು ಮಕ್ಕಳು ಒಂದೆರಡು ದಿನದ ಬಳಿಕ ಮಗ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಕಾರಣ ಮೃತ ದೇಹಗಳಲ್ಲಿ ಅತಿ ಹೆಚ್ಚು ಕೊಳೆತಿರೋ ದೇಹ ಪತ್ನಿ ಭಾರತಿಯರದ್ದು.
ಮೊದಲು ಮೃತ ಭಾರತಿಯವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಬಳಿಕ ತಡರಾತ್ರಿ ಇಬ್ಬರು ಹೆಣ್ಣು ಮಕ್ಕಳು ಪತ್ಯೇಕ ಕೋಣೆಗಳಲ್ಲಿ ನೇಣಿಗೆ ಶರಣಾಗಿದ್ದಾರೆ. ಒಂದೆರಡು ದಿನದ ಬಳಿಕ ಮಗ ಮಧು ಸಾಗರ್ ಆತ್ಮಹತ್ಯೆ ಮಾಡಿಕೊಂಡಿರೋ ಅನುಮಾನ ವ್ಯಕ್ತವಾಗಿದೆ. ಇಬ್ಬರು ಹೆಣ್ಣು ಮಕ್ಕಳ ದೇಹ ಸ್ವಲ್ಪ ಕಡಿಮೆ ಕೊಳೆತಿದೆ. ಆದರೆ ಮಗನ ದೇಹ ಕೊಳೆತಿಲ್ಲ. ದೇಹ ಪೂರ್ತಿ ಕಪ್ಪು ವರ್ಣಕ್ಕೆ ತಿರುಗಿದ್ದು, ಕೊಳೆಯಲು ಪ್ರಾರಂಭದ ಸ್ಥಿತಿಯಲ್ಲಿತ್ತು.
ದೂರಿನಲ್ಲಿ ಏನಿದೆ ?
ದೂರಿನಲ್ಲಿ ಶಂಕರ್ ಬರೆದಿರುವ ಮಾಹಿತಿ ಲಭ್ಯವಾಗಿದೆ. ನನ್ನ ಆಸ್ತಿ, ಹಣ ಎಲ್ಲವನ್ನು ಹೆಂಡತಿ ಹಾಗೂ ಮಗನಿಗೆ ನೀಡಿದ್ದೆ. ನನಗೆ ಹಣ ಬೇಕಾದಾಗ ಅವರನ್ನೇ ಕೇಳಿ ಪಡೆಯಬೇಕಾಗಿತ್ತು. ಕಳೆದ ಭಾನುವಾರ ಹೆಂಡತಿ ಜೊತೆಗೆ ಹೆಣ್ಣುಮಕ್ಕಳ ವಿಚಾರವಾಗಿ ಭಿನ್ನಾಭಿಪ್ರಾಯ ಮೂಡಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹೆಣ್ಣು ಮಕ್ಳಳನ್ನು ಗಂಡನ ಮನೆಗೆ ಕಳುಹಿಸುವಂತೆ ಹೇಳ್ತಿದ್ದರೂ ಕಳಿಸುವುದಿಲ್ಲ ಎಂದು ಪತ್ನಿ ಭಾರತಿ ಜಗಳ ಮಾಡಿದ್ದಳು. ಈ ವೇಳೆ ಹೆಣ್ಣು ಮಕ್ಕಳ ಜೀವನ ಹಾಳು ಮಾಡ್ತಿದ್ದೀಯಾ ಎಂದು ಕೋಪಗೊಂಡಿದ್ದೆ.
ಹಣದ ವ್ಯವಹಾರದ ವಿಚಾರವಾಗಿ ಮಗನ ಜೊತೆಗೆ ಕೂಡ ಭಿನ್ನಾಭಿಪ್ರಾಯವಿತ್ತು. ಮಗ ಬಾರ್ ಓಪನ್ ಮಾಡಲು 20 ಲಕ್ಷ ರೂ. ಕೊಟ್ಟು ರಿಜಿಸ್ಟರ್ ಮಾಡಿಸಲು ರೆಡಿ ಮಾಡಿಕೊಂಡಿದ್ದನು. ರಿಜಿಸ್ಟರ್ ಮಾಡಲು ಸಹಿ ಬೇಕಾಗಿದ್ದರಿಂದ ನಾನು ನಿರಾಕರಿಸಿದ್ದೆ. ಈ ವಿಚಾರವಾಗಿ ಕೂಡ ಭಾನುವಾರ ಮನೆಯಲ್ಲಿ ಜಗಳವಾಗಿತ್ತು. ಆಶ್ರಮ ಕಟ್ಟಿಸಲು 10 ಲಕ್ಷ ರೂ. ಅನ್ನು ಹೆಂಡತಿ ಮಕ್ಕಳಲ್ಲಿ ಕೇಳಿದ್ದೆ. ಈ ವೇಳೆ ಹಣ ನೀಡುವುದಕ್ಕೆ ಪತ್ನಿ, ಮಗ ನಿರಾಕರಿಸಿದ್ದರು. ಈ ವಿಚಾರವಾಗಿ ಕೂಡ ಭಾನುವಾರ ಜಗಳವಾಗಿ ಮನೆ ಬಿಟ್ಟಿದ್ದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.