ಸ್ವಾತಂತ್ರ್ಯದ ನಂತರ ರಾಷ್ಟ್ರದ ಅನೇಕ ಮಹಾನ್ ವ್ಯಕ್ತಿಗಳ ಕೊಡುಗೆಗಳನ್ನು ಅಳಿಸಲು ಪ್ರಯತ್ನಿಸಲಾಯಿತು - ಪ್ರಧಾನಿ ಮೋದಿ | ಜನತಾ ನ್ಯೂಸ್
ನವದೆಹಲಿ : ಸ್ವಾತಂತ್ರ್ಯದ ನಂತರ ಭಾರತದ ಸಂಸ್ಕೃತಿ ಮತ್ತು ಮೌಲ್ಯಗಳ ಜೊತೆಗೆ ಅನೇಕ ಮಹಾನ್ ವ್ಯಕ್ತಿಗಳ ಕೊಡುಗೆಗಳನ್ನು ಅಳಿಸಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸಲಾಯಿತು, ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು ಮತ್ತು ದೇಶವು ಈಗ ಹಿಂದಿನ ತಪ್ಪುಗಳನ್ನು ಸರಿಪಡಿಸುತ್ತಿದೆ ಎಂದು ಪ್ರತಿಪಾದಿಸಿದರು. ಇಂಡಿಯಾ ಗೇಟ್ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೊಲೊಗ್ರಾಮ್ ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ಅವರು ಮಾತನಾಡಿದರು.
ಕಳೆದ ವರ್ಷ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನಾಚರಣೆಯನ್ನು ಪರಾಕ್ರಮ ದಿವಸವಾಗಿ ಆಚರಿಲಾಗುವುದು ಎಂದು ಘೋಷಿಸಿದ್ದ ಪ್ರಧಾನಿ ಮೋದಿ ಈ ವರ್ಷ ಇಂಡಿಯಾ ಗೇಟ್ ನಲ್ಲಿ ನೇತಾಜಿಯವರ ಶಿಲೆಯ ಪ್ರತಿಮೆ ಅನಾವರಣವನ್ನು ಘೋಷಿಸಿದ್ದರು ಹಾಗೂ ಅಲ್ಲಿಯವರೆಗೆ ಹೊಲೊಗ್ರಾಮ್ ಪ್ರತಿಮೆಯನ್ನು ಅನಾವರಣಗೊಳಿಸುವ ನಿರ್ಣಯ ಪ್ರಕಟಿಸಿದ್ದರು.
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ವಾರ್ಷಿಕೋತ್ಸವದಂದು ಇಂಡಿಯಾ ಗೇಟ್ನಲ್ಲಿ ಹೊಲೊಗ್ರಾಮ್ ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, "ನವ ಭಾರತ ನಿರ್ಮಾಣದ ಗುರಿಯನ್ನು ಸಾಧಿಸುವುದನ್ನು ವಿಶ್ವದ ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ" ಎಂದು ಹೇಳಿದರು. ಅವರು 2047ರಲ್ಲಿ ಸ್ವಾತಂತ್ರ್ಯದ ನೂರನೇ ವರ್ಷದ ಆಚರಣೆಯನ್ನು ಉಲ್ಲೇಖಿಸಿದ್ದಾರೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ, "ಮಾಡಬಹುದು", "ನಾವು ಮಾಡುತ್ತೇವೆ", ಎಂಬ ಮನೋಭಾವದಿಂದ ಸ್ಫೂರ್ತಿ ಪಡೆಯಲು ಅವರು ಜನರನ್ನು ಉತ್ತೇಜಿಸಿದರು.
ದುರದೃಷ್ಟವಶಾತ್, ಸ್ವಾತಂತ್ರ್ಯದ ನಂತರ ರಾಷ್ಟ್ರದ ಸಂಸ್ಕೃತಿಯ ಜೊತೆಗೆ ಅನೇಕ ಮಹಾನ್ ವ್ಯಕ್ತಿಗಳ ಕೊಡುಗೆಗಳನ್ನು ಅಳಿಸಲು ಪ್ರಯತ್ನಿಸಲಾಯಿತು, ಎಂದು ಅವರು ಹೇಳಿದರು.
"ಭಾರತದ ಸ್ವಾತಂತ್ರ್ಯ ಹೋರಾಟವು ಲಕ್ಷಾಂತರ ಜನರ ತ್ಯಾಗವನ್ನು ಒಳಗೊಂಡಿತ್ತು, ಆದರೆ ಅವರ ಇತಿಹಾಸವನ್ನು ಮುಚ್ಚಿಹಾಕಲು ಪ್ರಯತ್ನಿಸಲಾಯಿತು. ಆದರೆ ಇಂದು, ಸ್ವಾತಂತ್ರ್ಯದ ಹಲವು ದಶಕಗಳ ನಂತರ, ದೇಶವು ಆ ತಪ್ಪುಗಳನ್ನು ಸರಿಪಡಿಸಲಾಗುತ್ತಿದೆ" ಎಂದು ಅವರು ಹೇಳಿದರು.
ಇದೇ ಸಮಾರಂಭದಲ್ಲಿ ಪ್ರಧಾನಿ ಮೋದಿಯವರು 2019, 2020, 2021 ಮತ್ತು 2022 ರ ಸಾಲಿನ "ಸುಭಾಸ್ ಚಂದ್ರ ಬೋಸ್ ಆಪ್ತ ಪ್ರಬಂಧನ್ ಪುರಸ್ಕಾರ"ವನ್ನು ಸಹ ಪ್ರದಾನ ಮಾಡಿದರು. ಸಮಾರಂಭದಲ್ಲಿ ಒಟ್ಟು ಏಳು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ವಿಪತ್ತು ನಿರ್ವಹಣೆ ಕ್ಷೇತ್ರದಲ್ಲಿ ಭಾರತದಲ್ಲಿನ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸಲ್ಲಿಸಿದ ಅಮೂಲ್ಯ ಕೊಡುಗೆ ಮತ್ತು ನಿಸ್ವಾರ್ಥ ಸೇವೆಯನ್ನು ಗುರುತಿಸಲು ಮತ್ತು ಗೌರವಿಸಲು ಕೇಂದ್ರ ಸರ್ಕಾರವು ವಾರ್ಷಿಕ ಪ್ರಶಸ್ತಿಯನ್ನು ಪ್ರಸ್ತುತ ವರ್ಷದಿಂದ ಸ್ಥಾಪಿಸಿರುವ ಕುರಿತು ತಿಳಿಸಿದ ಪ್ರಧಾನಿ ಮೋದಿಯವರು, ತಮ್ಮ ಜೀವವನ್ನು ಲೆಕ್ಕಿಸದೇ ಇನ್ನೊಬ್ಬರ ಜೀವ ರಕ್ಷಿಸಲು ಮುಂದಾಗುವ ಜೀವ ರಕ್ಷಕರಿಗೆ ತಾವು ನಮಿಸುವುದಾಗಿ ಹೇಳಿದ್ದಾರೆ.