ರಮೇಶ್ ಜಾರಕಿಹೊಳಿಯಿಂದ ಬ್ಯಾಂಕ್ಗಳಿಗೆ 819 ಕೋಟಿ ವಂಚನೆ: ಕಾಂಗ್ರೆಸ್ ಗಂಭೀರ ಆರೋಪ! | JANATA NEWS
ಬೆಂಗಳೂರು : ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಬಿಜೆಪಿ ಸರ್ಕಾರ ತಂದ ರೂವಾರಿ ರಮೇಶ್ ಜಾರಕಿಹೊಳಿ ಅವರು ಸುಮಾರು 819 ಕೋಟಿ ಸಾರ್ವಜನಿಕ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರರಾದ ಲಕ್ಷ್ಮಣ್ ಆರೋಪಿಸಿದ್ದಾರೆ.
ಇದು ಗಂಭೀರವಾದ ವಿಚಾರವಾಗಿದ್ದು, ಇದರಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ, ಕೇಂದ್ರ ಸಚಿವ ಅಮಿತ್ ಶಾ, ಮಹರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಕರ್ನಾಟಕ ರಾಜ್ಯದ ಹಾಲಿ ಮುಖ್ಯಮಂತ್ರಿಗಳು ಇದರಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಅವರು ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದರು.
ಇವರು ಇಷ್ಟು ದೊಡ್ಡ ಮೊತ್ತದ ಸಾರ್ವಜನಿಕರ ಆಸ್ತಿಯನ್ನು ನುಂಗಿ ಉಂಡೆನಾಮ ಹಾಕಿದ್ದರೂ ಅವರಿಗೆ ಒಂದೇ ಒಂದು ನೊಟೀಸ್ ಅನ್ನು ಜಾರಿ ಮಾಡದಿರುವುದು ದುರಂತ ಎಂದು ಹೇಳಿದರು.
ಸೌಭಾಗ್ಯ ಲಕ್ಷ್ಮೀ ಶುಗರ್ ಲಿಮಿಟೆಡ್ ಗೆ 6 ಮಂದಿ ಬೋರ್ಡ್ ಆಫ್ ಡೈರೆಕ್ಟರ್, 4 ಜನ ಅವರ ಕುಟುಂಬದವರು, ಉಳಿದವರು ಇವರ ಬೇನಾಮಿಗಳು. ಈ ಕಂಪನಿ ಯಾವ ಬ್ಯಾಂಕಿಗೆ ಎಷ್ಟು ಸಾಲ ನೀಡಬೇಕು ಎಂದು ಲಿಖಿತ ರೂಪದಲ್ಲಿ ತಿಳಿಸಿದೆ. ಅದರ ಪ್ರಕಾರ, ಕರ್ನಾಟಕ ಸ್ಟೇಟ್ ಕೋ ಆಪರೇಟಿವ್ ಅಪೆಕ್ಸ್ ಬ್ಯಾಂಕ್ ಲಿ. ಗೆ 180 ಕೋಟಿ ರೂ. ಐಕೆಮೆಸ್ಟ್ ಆಸೆಟ್ ರೀಕನ್ಸ್ಟ್ರಕ್ಷನ್ ಲಿ. 128.96 ಕೋಟಿ ರೂ., ವಿಜಯಪುರ ಡಿಸಿಸಿ ಬ್ಯಾಂಕ್ ಲಿ. 57 ಕೋಟಿ ರೂ., ಸೌಥ್ ಕೆನರಾ ಡಿಸಿಸಿಗೆ 44 ಕೋಟಿ ರೂ., ತುಮಕೂರು ಡಿಸಿಸಿಗೆ 44.33 ಕೋಟಿ ರೂ., ಕರ್ನಾಟಕ ಡಿಸಿಸಿ ಬ್ಯಾಂಕ್ ಗೆ 51 ಕೋಟಿ, ಶ್ರೀ ಹರಿಹಂತ್ ಕ್ರೆಡಿಟ್ ಸಹಕಾರ ಲಿಮಿಟೆಡ್ 42.22 ಕೋಟಿ ರೂ. ನೀಡಬೇಕಿದೆ. ಯೂನಿಯನ್ ಬ್ಯಾಂಕ್ ನಲ್ಲಿ 22.66 ಕೋಟಿ, ಶ್ರೀ ಬೀರವೇಶ್ವರ ಸೌಹಾರ್ದ್ ಕ್ರೆಡಿಟ್ ಸಹಕಾರ ಲಿಮಿಟೆಡ್ ನಿಂದ 6.87 ಕೋಟಿ ಸೇರಿದಂತೆ ಒಟ್ಟು 578.39 ಕೋಟಿ ಸಾಲ ಪಡೆದಿದ್ದಾರೆ.
ಹರಿಹಂತ್ ಕ್ರೆಡಿಟ್ ಸಹಕಾರ ಲಿಮಿಟೆಡ್ ನಡೆಸುತ್ತಿರುವ ಅಭಿನಂದನ್ ಪಾಟೀಲ್ ಅವರು ರಮೇಶ್ ಜಾರಕಿಹೋಳಿ ಅವರ ಬೇನಾಮಿ ಆಗಿದ್ದಾರೆ. ರಮೇಶ್ ಜಾರಕಿಹೋಳಿ ಅವರು ಇವರಿಂದಲೇ 42.24 ಕೋಟಿ ಸಾಲ ಪಡೆದಿದ್ದಾರೆ ಎಂದು ವಿವರಿಸಿದರು.
ಈ ಸಾಲ ಪಡೆದಿರುವುದರ ಜತೆಗೆ ಕಬ್ಬು ರೈತರಿಗೆ 50 ಕೋಟಿ ರೂ. ಬಾಕಿ, ಗುತ್ತಿಗೆದಾರರಿಗೆ 5 ಕೋಟಿ, ಸರಬರಾಜುದಾರರಿಗೆ 50 ಕೋಟಿ ಬಾಕಿ ಉಳಿಸಿಕೊಂಡಿದೆ. ಇನ್ನು ಶ್ರೀ ಕೊಂಡಿಶೆಟ್ಟಿ ಕುಮಾರ ದುಶ್ಯಂತ ಎಂಬ ಸೌಭಾಗ್ಯ ಲಕ್ಷ್ಮಿ ಶುಗರ್ ಕಂಪನಿಯ ಆರ್ಬಿಟ್ರೇಟರ್ ಅವರು ಆದಾಯ ತೆರಿಗೆಗೆ 19-5-2020 ರಂದು ಬರೆದ ಪತ್ರದಲ್ಲಿ 2011ರಿಂದ 156.64 ಕೋಟಿ ರೂ. ಆದಾಯ ತೆರಿಗೆ ಬಾಕಿ ಇದೆ ಎದು ತಿಳಿಸಿದ್ದಾರೆ. ಇದೆಲ್ಲವೂ ಸೇರಿ ರಮೇಶ್ ಜಾರಕಿಹೊಳಿ ಅವರು ಮೋಸ ಮಾಡಲು ಹೊರಟಿರುವ ಒಟ್ಟಾರೆ ಮೊತ್ತ 819 ಕೋಟಿ.
ಎಲ್ಲಾ ಡಿಸಿಸಿ ಬ್ಯಾಂಕುಗಳಿಗೆ ಮುಖ್ಯಸ್ಥವಾಗಿರುವ ಅಪೆಕ್ಸ್ ಬ್ಯಾಂಕ್ ಸಾಲ ವಸೂಲಿಗೆ 2019ರಲ್ಲಿ ನೊಟೀಸ್ ಜಾರಿ ಮಾಡಿದ್ದು, ನಿಮ್ಮ ಆಸ್ತಿಗಳನ್ನು ಯಾಕೆ ಮುಟ್ಟುಗೋಲು ಹಾಕಿಕೊಳ್ಳಬಾರದು ಎಂದು ತಿಳಿಸುತ್ತಾರೆ. ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರು ಹಾಗೂ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಅವರು ಈ ನೋಟೀಸ್ ಜಾರಿ ಮಾಡುತ್ತಾರೆ. ನೋಟೀಸ್ ಉಲ್ಲೇಖಿಸಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುತ್ತಾರೆ. ಆದರೂ ಜಿಲ್ಲಾಧಿಕಾರಿಗಳು ಇದುವರೆಗೂ ಮಲಗಿದ್ದಾರೆ ಎಂದು ಆರೋಪ ಮಾಡಿದರು.