ಟ್ಯಾಂಕರ್ ಹಾಗೂ ಕಾರು ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು | JANATA NEWS
ಯಾದಗಿರಿ : ಟ್ಯಾಂಕರ್ ಹಾಗೂ ಕಾರು ನಡುವೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ 6 ಮಂದಿ ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ಗುರುಮಠಕಲ್ ಬಳಿ ನಡೆದಿದೆ.
ಮಹ್ಮದ್ ವಾಜೀದ್ ಹುಸೇನ್(39), ಮಹ್ಮದ್ ಮಜರ್ ಹುಸೇನ್(79), ನೂರ್ ಜಹಾನ್ ಬೇಗಂ (70), ಹೀನಾ ಬೇಗಂ(30), ಇಮ್ರಾನ್ (22), ಆರು ತಿಂಗಳ ಮಗು ಉಮೇಜಾ ಹಾಗೂ ಮಹ್ಮದ್ ಫಾಜೀಲ್ ಹುಸೇನ್ ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.
ಗಂಭೀರವಾಗಿ ಗಾಯಗೊಂಡ ಚಾಲಕನನ್ನ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರು ರಾಯಚೂರು ಜಿಲ್ಲೆಯ ಲಿಂಗಸೂಗೂರು ಹಟ್ಟಿಯವರು ಎಂದು ತಿಳಿದುಬಂದಿದೆ. ತೆಲಂಗಾಣದ ಕೊಡಂಗಲ್ ಸಮೀಪದ ದರ್ಗಾಕ್ಕೆ ತೆರಳಿದ್ದರು.
ದರ್ಗಾದಲ್ಲಿ ಪೂಜೆ ಸಲ್ಲಿಸಿ ಹಟ್ಟಿ ಗ್ರಾಮಕ್ಕೆ ವಾಪಸ್ ಬರುತ್ತಿರುವಾಗ ದುರ್ಘಟನೆ ನಡೆದಿದೆ. ಲಾರಿ ಚಾಲಕ ಘಟನೆ ಬಳಿಕ ಸ್ಥಳದಿಂದ ಪರಾರಿ ಆಗಿದ್ದಾನೆ. ಗುರಮಿಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.