ಉರಿಗೌಡ ನಂಜೇಗೌಡ್ರು ಬಗ್ಗೆ ಮಂಡ್ಯದಲ್ಲಿ ನಮ್ಮ ತಂಡದಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ: ಸಿ.ಟಿ. ರವಿ | JANATA NEWS
ಚಿಕ್ಕಮಗಳೂರು : ಮಂಡ್ಯದಲ್ಲಿ ನಮ್ಮ ತಂಡವು ಟಿಪ್ಪುವನ್ನು ಕೊಂದಿದ್ದ ಉರಿಗೌಡ ನಂಜೇಗೌಡರ ಬಗ್ಗೆ ದಾಖಲೆ ಸಂಗ್ರಹಿಸುವ ಕೆಲಸ ಮಾಡುತ್ತಿದೆ. ದಾಖಲೆ ಸಿಕ್ಕ ಕೂಡಲೇ ಅದನ್ನು ಆದಿಚುಂಚನಗಿರಿ ಶ್ರೀಗಳ ಮುಂದಿಟ್ಟು ಚರ್ಚೆ ನಡೆಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ತಿಳಿಸಿದ್ದಾರೆ.
ಸಿ.ಟಿ.ರವಿ ಉರಿಗೌಡ, ಅಶ್ವಥ್ ನಾರಾಯಣ್ ನಂಜೇಗೌಡ ಎಂಬಂತೆ ಬಿಂಬಿಸಿ ಸೋಶಿಯಲ್ ಮೀಡಿಯಾದಲ್ಲಿ ಆಧಾರ್ ಕಾರ್ಡ್ ಹರಿಬಿಟ್ಟಿರುವುದನ್ನು ಸಮರ್ಥಿಸಿಕೊಂಡರು. ಹೌದು, ನಾವು ಅದೇ. ನಮಗೆ ಖುಷಿ, ಹೆಮ್ಮೆ ಇದೆ ಎಂದರು. ಗುಲಾಮಿ ಮಾನಸಿಕತೆಯಲ್ಲಿ ಬದುಕುವ ಜನರಿಗಿಂತ ಹಾಗೆ ಕರೆಸಿಕೊಳ್ಳುವುದು ಒಳ್ಳೆಯದು ಎಂದು ಕಾಂಗ್ರೆಸ್ ಪ್ರಚಾರಕ್ಕೆ ಟಾಂಗ್ ನೀಡಿದರು.
ಸ್ಥಳೀಯವಾಗಿ ಮಾಹಿತಿ ಕಲೆ ಹಾಕುವ ಕೆಲಸ ಮಾಡಲಾಗುತ್ತಿದೆ. ಮಾಹಿತಿ ಕಲೆ ಹಾಕಲು ಒಂದು ತಂಡ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಉರಿಗೌಡ, ನಂಜೇಗೌಡ ಐತಿಹಾಸಿಕ ವ್ಯಕ್ತಿಗಳು ಎಂಬುದರ ಬಗ್ಗೆ ಸಾಕ್ಷ್ಯ ಇದೆ. ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರಿಗೌಡ, ನಂಜೇಗೌಡ ಹೆಸರುಗಳ ಉಲ್ಲೇಖ ಮಾಡಲಾಗಿದ್ದು, ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಶ್ರೀಗಳಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ಸ್ಥಳೀಯವಾಗಿ ಸಂಶೋಧನೆ ನಡೆಸುತ್ತಿರುವ ತಂಡಕ್ಕೆ ಟಿಪ್ಪು ಹಿಂದೂದ್ರೋಹಿ ಎಂಬ ಸಾಕಷ್ಟು ಮಾಹಿತಿಗಳು ಸಿಕ್ಕಿವೆ. ಟಿಪ್ಪು ಸುಲ್ತಾನ್ ತನ್ನ ಆಡಳಿತದಲ್ಲಿ ಮತಾಂತರ ಮಾಡಿದ್ದು, ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿದ್ದ ವಿಜೃಂಭಣೆಯ ದಸರಾ ಉತ್ಸವ ನಿಲ್ಲಿಸಿದ್ದರ ಬಗ್ಗೆ ದಾಖಲೆಗಳಿವೆ.
ಮುಂದುವರೆದು ಆಂಜನೇಯ ಸ್ವಾಮಿ ದೇವಸ್ಥಾನವನ್ನು ಜಾಮಿಯಾ ಮಸೀದಿ ಮಾಡಿದ್ದು, ಮಂಡ್ಯದ ಸುತ್ತಮುತ್ತಲ ಗ್ರಾಮಗಳ ಹೆಸರು ಬದಲಾಯಿಸಿರುವ ಬಗ್ಗೆಯೂ ಅಧಿಕೃತ ದಾಖಲೆಗಳು ಸಿಕ್ಕಿವೆ ಎಂದು ಸಿಟಿ ರವಿ ಅವರು ಮಾಹಿತಿ ನೀಡಿದರು.
ಟಿಪ್ಪುವನ್ನು ನೀವು ಹೇಗೆ ಮೈಸೂರಿನ ಹುಲಿ, ಧರ್ಮಸಹಿಷ್ಣು, ಕನ್ನಡ ಪ್ರೇಮಿ ಅಂತ ಕರೆಯುತ್ತೀರಾ. ಆತ ತನ್ನ ಖಡ್ಗದ ಮೇಲೆ ಕಾಫಿಗರ ರಕ್ತಕ್ಕಾಗಿ ತನ್ನ ಖಡ್ಗ ತಹತಹಿಸುತ್ತಿದೆ ಎಂದು ಅರೆಬಿಕ್ ಭಾಷೆಯಲ್ಲಿ ಬರೆಸಿಕೊಂಡಿದ್ದ. ರಕ್ತಕ್ಕಾಗಿ ಹಾತೊರೆಯುತ್ತಿದ್ದವನನ್ನು ಮತಾಂಧ ಅನ್ನದೆ ಇನ್ನೇನು ಹೇಳಬೇಕು ಎಂದು ಟಿಪ್ಪು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.