ಜೂನ್ 21ರಂದು ಕಂಕಣ ಸೂರ್ಯಗ್ರಹಣ; ಯಾವ ರಾಶಿಯವರಿಗೆ ಶುಭಫಲ, ಅಶುಭ! | Janata news
ಬೆಂಗಳೂರು : ಜೂನ್ 21ರ ಭಾನುವಾರ ಆಷಾಢ ಮಾಸದ ಅಮಾಸ್ಯೆಯಂದು 2020ರ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಚಂದ್ರನ ಹಿಂದಿರುವ ಸೂರ್ಯನ ಚಿತ್ರಣವು ಚಂದ್ರನ ನೆರಳಿನಿಂದ ಆವರಿಸಲ್ಪಡುತ್ತದೆ. ಈ ವಿದ್ಯಾಮಾನವನ್ನು ಸೂರ್ಯಗ್ರಹಣವೆಂದು ಕರೆಯಲಾಗುತ್ತದೆ.
ಕರ್ನಾಟಕದಲ್ಲಿ ಬೆಳಗ್ಗೆ 10:12 ಕ್ಕೆ ಗ್ರಹಣ ಆರಂಭ, ಬೆಳಗ್ಗೆ 11:47ಕ್ಕೆ ಗ್ರಹಣ ಮಧ್ಯಕಾಲವಾಗಲಿದ್ದು ಭಾಗಶಃ ಸೂರ್ಯಗ್ರಹಣವಾಗಲಿದೆ. ಮಧ್ಯಾಹ್ನ 1:31ಕ್ಕೆ ಗ್ರಹಣ ಮೋಕ್ಷ ಸಂಭವಿಸುವುದು.
ಈ ಸಮಯದಲ್ಲಿ ಸೂರ್ಯನು ಬೆಂಕಿಯುಂಗುರದಂತೆ ಕಾಣಿಸುವುದರಿಂದ, ಇದೊಂದು ಅಪರೂಪದ ವಿದ್ಯಾಮಾನವಾಗಿದ್ದು, ಸೂರ್ಯಗ್ರಹಣದ ಸಮಯದಲ್ಲಿ ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ. ಆದರೆ ಈ ದೃಶ್ಯ ಕಾಣಿಸಿಕೊಳ್ಳಲಿರುವುದು ರಾಜಸ್ಥಾನ, ಹರಿಯಾಣ ಮತ್ತು ಉತ್ತರಾಖಂಡ್ನಲ್ಲಿ ಮಾತ್ರ. ಇದನ್ನು ಹೊರತುಪಡಿಸಿ ದೇಶದ ಕೆಲವೆಡೆ ಭಾಗಶಃ ಸೂರ್ಯಗ್ರಹಣವನ್ನು ಕಾಣಬಹುದಾಗಿದೆ.
ಈ ಗ್ರಹಣದಲ್ಲಿ ಸೂರ್ಯನ ಹೊರಗಿನ ಅಂಚು ಬೆಂಕಿಯ ಉಂಗುರ ದಂತೆ ಕಾಣುತ್ತದೆ. ಈ ಗ್ರಹಣದಲ್ಲಿ ಚಂದ್ರನು ಸೂರ್ಯನ 98.8%ರಷ್ಟು ಭಾಗವನ್ನು ಆವರಿಸುವುದರಿಂದ ಈ ಉಂಗುರವು ತೆಳುವಾಗಿ ಕಾಣುತ್ತದೆ. ಈ ಗ್ರಹಣವು ಈ ಶತಮಾನದ ಆಳವಾದ ಭಾಗಶಃ ಗ್ರಹಣವೆಂದು ತಜ್ಞರು ಹೇಳುತ್ತಾರೆ. ಇದೇ ರೀತಿಯ ಗ್ರಹಣವು ಮುಂದೆ ಹನ್ನೊಂದು ವರ್ಷಗಳ ನಂತರ ಅಂದರೆ 2031ರಲ್ಲಿ ದೇಶದಲ್ಲಿ ಗೋಚರಿಸಲಿದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯಗ್ರಹಣ ಕೆಲವರಿಗೆ ಪ್ರಯೋಜನಕಾರಿಯಾಗಬಹುದು ಮತ್ತು ಕೆಲವರಿಗೆ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುವುದು. ರಾಶಿಗಳ ಮೇಲೆ ಗ್ರಹಣದ ಪರಿಣಾಮಗಳೇನು ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಮೃಗಶಿರಾ ನಕ್ಷತ್ರ ಮಿಥುನ ರಾಶಿಯಲ್ಲಿ ಸೂರ್ಯನಿಗೆ ರಾಹುಗ್ರಹಣ ಸಂಭವಿಸುವುದರಿಂದ ಕನ್ಯಾ, ಮಕರ, ಸಿಂಹ ಹಾಗೂ ಮೇಷ ರಾಶಿಯವರಿಗೆ ಶುಭಫಲ ಇದೆ.
ಮಿಥುನ, ಕರ್ಕಾಟಕ, ತುಲಾ, ವೃಷಭ, ವೃಶ್ಚಿಕ, ಧನು, ಕುಂಭ ಮತ್ತು ಮೀನ ರಾಶಿಯವರಿಗೆ ಈ ಭಾಗಶಃ ಸೂರ್ಯಗ್ರಹಣದಿಂದ ಅಶುಭ ಫಲವಿದ್ದು, ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ.
ಸೂರ್ಯಗ್ರಹಣವನ್ನು ನೋಡಿದರೆ ಗಂಭೀರ ಅಥವಾ ಶಾಶ್ವತ ಕಣ್ಣಿನ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಸುರಕ್ಷಿತ ಸೋಲಾರ್ ಫಿಲ್ಟರ್, ಸೌರ ಕನ್ನಡಕ, ಪಿನ್ ಹೋಲ್ ಕ್ಯಾಮರಾ ಬಳಸಿ ನೋಡಬಹುದು.