ದೆವ್ವ ಬಿಡಿಸೋ ನೆಪದಲ್ಲಿ ಬೆತ್ತದಿಂದ ಹೊಡೆದು 2 ವರ್ಷದ ಮಗು ಕೊಂದ ಪೂಜಾರಿ! | Janata news
ಚಿತ್ರದುರ್ಗ : ಎರಡು ವರ್ಷದ ಮಗುವಿಗೆ ದೆವ್ವ ಬಿಡಿಸುವ ನೆಪದಲ್ಲಿ 2 ವರ್ಷದ ಮಗುವಿಗೆ ಬೆತ್ತದಿಂದ ಹೊಡೆದು, ಪುಟ್ಟ ಮಗು ಕೊಂದಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಮೃತ ದುರ್ದೈವಿ ಮಗುವನ್ನು ಪೂರ್ಣಿಕಾ ಎಂದು ಗುರುತಿಸಲಾಗಿದ್ದು, ಈಕೆ ಪ್ರವೀಣ್ ಹಾಗೂ ಬೇಬಿ ದಂಪತಿಯ ಪುತ್ರಿ.
ಎರಡು ವರ್ಷದ ಪುತ್ರಿ ಪೂರ್ಣಿಕಾ ಪದೇ ಪದೇ ಬೆಚ್ಚಿ ಬೀಳುತ್ತಿದ್ದಳು. ತಮ್ಮ ಪುತ್ರಿ ಮಾಟ-ಮಂತ್ರದ ಕಾಟದಿಂದ ಹೀಗೆ ಆಡ್ತಾ ಇರಬಹುದು ಎಂಬುದಾಗಿ ನಂಬಿ, ಅಜ್ಜಿ ಕ್ಯಾತನಹಳ್ಳಿಯ ಯಲ್ಲಮ್ಮನ ಪೂಜಾರಿ ರಾಕೇಶ್ ಎಂಬಾತನ ಬಳಿಗೆ ಕರೆದುಕೊಂಡು ಹೋಗಿ ತೋರಿಸಿದ್ದಾರೆ.
ಈ ರಾಕ್ಷಸ ಮಗುವಿಗೆ ಯಾರೋ ಮಾಟ, ಮಂತ್ರ ಮಾಡಿಸಿದ್ದಾರೆ, ದೆವ್ವ ಹಿಡಿದಿದೆ ಎಂದು ಹೇಳಿದ್ದಾನೆ. ದೆವ್ವ ಬಿಡಿಸಬೇಕು ಎಂದಾಗ ಮಗುವಿನ ಪೋಷಕರು ಒಪ್ಪಿಕೊಂಡರು. ಅಂತೆಯೇ ರಾಕೇಶ್ ದೆವ್ವ ಬಿಡಿಸುವ ನೆಪದಲ್ಲಿ ಎಕ್ಕೆಗಿಡ ಬೆತ್ತದಿಂದ ಬಾರಿಸಿದ್ದಾನೆ. ರಾಕೇಶ್ ಹೊಡೆತಕ್ಕೆ ಪೂರ್ಣಿಕಾ ದೇಹದ ತುಂಬ ಬೆತ್ತದ ಗಾಯ, ಬಾಸುಂಡೆ ಎದ್ದಿದೆ. ಅಲ್ಲದೆ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾಳೆ.
ಇತ್ತ ಮಗು ಕುಸಿದು ಬಿದ್ದಿದ್ದರಿಂದ ರಾಕೇಶ್, ಪೂರ್ಣಿಕಾ ಪೋಷಕರನ್ನು ಕರೆದು ಮಗುವಿಗೆ ಪ್ರಜ್ಞೆ ತಪ್ಪಿದೆ, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ಸಂಬಂಧ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.