ಪ್ರಧಾನಿ ಮೋದಿಯೇ ನನಗೆ CM ಆಫರ್ ನೀಡಿದ್ದರು: ಹೆಚ್.ಡಿ. ಕುಮಾರಸ್ವಾಮಿ | Janata news
ತುಮಕೂರು : ಬಿಜೆಪಿಯವರು ನನ್ನನ್ನು ಸಿಎಂ ಮಾಡಲು ಮುಂದಾಗಿದ್ದರು ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ನವೆಂಬರ್ 3 ರಂದು ಶಿರಾ ವಿಧಾನಸಭೆ ಕ್ಷೇತ್ರಕ್ಕೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಇಂದು ಜೆಡಿಎಸ್ ಬೃಹತ್ ಸಮಾವೇಶ ನಡೆಸಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ.. ಅದೆಷ್ಟೋ ದಿನಗಳ ಬಳಿಕ ಈ ಭಾಗದ ಕಾರ್ಯಕರ್ತರ ಜೊತೆ ಸಭೆ ಮಾಡಲಾಗಿದೆ. ಇದರಿಂದ ಕಾರ್ತಕರ್ತರು ಎದೆಗುಂದಬೇಕಿಲ್ಲ. ಕಳೆದ ವಿಧಾನಸಭೆ ಫಲಿತಾಂಶ ನೋಡಿ ರಾಜಕೀಯದಿಂದ ನಾನು ನಿರ್ಗಮಿಸಬೇಕು ಅಂದುಕೊಂಡೆ ಎಂದು ಹೇಳಿದರು.
ದೇವೇಗೌಡರು, ಕುಮಾರಸ್ವಾಮಿ ಆರೋಗ್ಯ ಸರಿ ಇಲ್ಲ. ನಿಮ್ಮಲ್ಲಿ ಯಾರಿಗಾದರೂ ಮುಖ್ಯಮಂತ್ರಿ ಮಾಡಿ ಅಂತಾ ಕಾಂಗ್ರೆಸ್ಗೆ ಹೇಳಿದರು. ಎಷ್ಟೇ ಹೇಳಿದ್ರೂ ಕೇಳದೇ ನನಗೆ ಕಾಂಗ್ರೆಸ್ನವರು ಮುಖ್ಯಮಂತ್ರಿ ಪಟ್ಟ ಕಟ್ಟಿದರು.
ನನಗೆ ಮುಖ್ಯಮಂತ್ರಿ ಆಗುವ ಆಸೆ ಇರಲಿಲ್ಲ. ಬಿಜೆಪಿ ಅವರೂ ನನ್ನನ್ನು ಮುಖ್ಯಮಂತ್ರಿ ಮಾಡಲು ಮುಂದಾಗಿದ್ದರು. ಕೇಂದ್ರದಿಂದ ನರೇಂದ್ರ ಮೋದಿಯವರೇ ಆಫರ್ ಮಾಡಿದ್ದರು. ಐದು ವರ್ಷ ನಿನ್ನನ್ನು ಯಾರೂ ಟಚ್ ಮಾಡಲ್ಲ ಅಂದಿದ್ದರು. ಕಾಂಗ್ರೆಸ್ ಪಕ್ಷದ ಸಂಕುಚಿತ ಮನೋಭಾವದಿಂದ ರಾಜ್ಯದಲ್ಲಿ ದರಿದ್ರ ಸರ್ಕಾರ ಬಂದಿದೆ. ಸಿದ್ದರಾಮಯ್ಯ ಆಡಳಿತದಲ್ಲಿದ್ದಾಗ ತೆಗೆದುಕೊಂಡ ಕೆಲ ತಪ್ಪು ನಿರ್ಧಾರದಿಂದ ಬಡವರಿಗೆ ಮನೆ ಕಟ್ಟಿಕೊಡಲು ಇದುವರೆಗೂ ಆಗಿಲ್ಲ ಅಂತಾ ಕಾಂಗ್ರೆಸ್ ವಿರುದ್ಧ ಗುಡುಗಿದರು.
ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂದು ರಾಹುಲ್ ಗಾಂಧಿಯಿಂದಲೇ ಹಾಸನದಲ್ಲಿ ಭಾಷಣ ಮಾಡಿದ್ದರು ಎಂದು ಹೆಚ್ಡಿ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಪ್ರಹಾರ ಮಾಡಿದ್ದಾರೆ.