ವಿಜಯಪುರದಲ್ಲಿ ಡಿಕ್ಕಿಯ ರಭಸಕ್ಕೆ ಹೊತ್ತಿ ಉರಿದ 2 ಬೈಕ್ಗಳು, ಮೂವರ ದಾರುಣ ಸಾವು! | Janata news
ವಿಜಯಪುರ : ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಬಳಿಯ ದಿಂಡವಾರ ರಸ್ತೆಯಲ್ಲಿ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಎರಡೂ ಬೈಕ್ ಗಳು ಹೊತ್ತಿ ಉರಿದು, ಮೂವರು ಯುವಕರು ಸಾವಿಗೀಡಾದ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದ ಬಳಿ ನಡೆದಿದೆ.
ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಹೂವಿನ ಹಿಪ್ಪರಗಿ ಗ್ರಾಮದ ದಿಂಡವಾರ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮೂರು ಜನ ಸಾವಿಗೀಡಾಗಿದ್ದಾರೆ. ಇವರಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾದರೆ, ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವಿಗೀಡಾಗಿದ್ದಾನೆ. ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ಯುವಕರು ಕಲಬುರ್ಗಿ ಜಿಲ್ಲೆಯ ಅಫ್ಜಲಪುರದಿಂದ ಅಂಜನಾದ್ರಿ ಬೆಟ್ಟಕ್ಕೆ ಬೈಕ್ ಸವಾರಿ ಹೊರಟಿದ್ದರು. ಈ ವೇಳೆ ವೇಗವಾಗಿ ಚಲಿಸುತ್ತಿದ್ದ ಯುವಕರು ವಿರುದ್ಧ ದಿಕ್ಕಿನಿಂದ ಬಂದ ಗಾಡಿಯನ್ನು ನೋಡದೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಗುದ್ದಿದ ರಭಸಕ್ಕೆ 2 ಬೈಕ್ಗಳು ಸುಟ್ಟು ಕರಕಲಾಗಿದ್ದು, ಇನ್ನೆರಡು ಬೈಕ್ಗಳು ಜಖಂ ಆಗಿ ನಿಂತಿವೆ.
ಸಾವಿಗೀಡಾದವರನ್ನು ಕಲಬುರ್ಗಿ ಜಿಲ್ಲೆಯ ಅಫ್ಜಲಪುರ ತಾಲೂಕಿನ ಕುಮಾರ ಬಲಗುಂಪಿ( 22), ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಜಾಯವಾಡಗಿ ಗ್ರಾಮದ ಬಸವರಾಜ ಹಂದ್ರಾಳ (26) ಹಾಗೂ ಸಾಬಣ್ಣ ಸಿದ್ದಾಪುರ (24) ಎಂದು ಗುರುತಿಸಲಾಗಿದೆ. ಇನ್ನೊಬ್ಬನಿಗೆ ಗಂಭೀರ ಗಾಯವಾಗಿದ್ದು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸ್ಥಳದಲ್ಲಿ ಜಖಂ ಆಗಿ ನಿಂತ ಇನ್ನೆರೆಡು ಬೈಕ್ ಗಳು ನಿಂತಿದ್ದು, ವೇಗವಾಗಿ ಬಂದು ಬೈಕ್ಗಳು ಡಿಕ್ಕಿ ಹೊಡೆದರೂ ಸತ್ತವರಿಗೆ ಕೇವಲ ತಲೆಗೆ ಮಾತ್ರ ಗಾಯವಾಗಿದೆ. ಇನ್ನೋರ್ವನಿಗೂ ತಲೆಗೆ ಮಾತ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.