ಕೈ-ಕಾಲು ಕಟ್ಟಿ ವೃದ್ಧನನ್ನು ಬರ್ಬರ ಹತ್ಯೆ ಮಾಡಿದ ಶ್ರೀಗಂಧದ ಮರಗಳ್ಳರು! | Janata news
ಚಾಮರಾಜನಗರ : ಶ್ರೀಗಂಧದ ಮರ ಕದ್ದೊಯ್ಯಲು ಬಂದ ದುಷ್ಕರ್ಮಿಗಳು ಮನೆಯ ಮಾಲೀಕನನ್ನೇ ಹತ್ಯೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಚಂದಕವಾಡಿಯಲ್ಲಿ ನಡೆದಿದೆ. ಜನನಿಬಿಡ ಪ್ರದೇಶದಲ್ಲೇ ನಡೆದಿರುವ ಈ ಘಟನೆಯಿಂದ ಗ್ರಾಮದ ಜನತೆ ಬೆಚ್ಚಿಬಿದ್ದಿದ್ದಾರೆ.
ಗ್ರಾಮದ ಶಿವಬಸಪ್ಪ (80) ಕೊಲೆಗೀಡಾದ ವ್ಯಕ್ತಿಯಾಗಿದ್ದು ಮನೆಯ ಅನತಿ ದೂರದಲ್ಲೇ ಇವರ ಶವ ಪತ್ತೆಯಾಗಿದೆ. ಬಾಯಿಗೆ ಬಟ್ಟೆ ತುರುಕಿ, ಕೈಕಾಲು ಕಟ್ಟಿ, ಟವೆಲ್ ನಿಂದ ಕುತ್ತಿಗೆ ಬಿಗಿದು ಹತ್ಯೆಗೈಯ್ಯಲಾಗಿದೆ.
ಮನೆ ಮುಂದೆ ಬೆಳದು ನಿಂತಿದ್ದ ಶ್ರೀಗಂಧ ಹಾಗು ಮನೆಯ ಮುಂಭಾಗವೇ ಇರುವ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿರುವ ದನಕರುಗಳ ರಕ್ಷಣೆಗೆಂದೆ ಅವರು ಮನೆಯ ಹೊರಗೆ ಮಲಗುತ್ತಿದ್ದರು.
ನಿನ್ನೆ ಮಧ್ಯರಾತ್ರಿ ಶ್ರೀಗಂಧದ ಮರ ಕಡಿದು ಕದ್ದೊಯ್ಯಲು ಬಂದ ಕಳ್ಳರಿಗೆ ಮನೆಯ ಹೊರಗೆ ಮಾಲೀಕ ಶಿವಬಸಪ್ಪ ಮಲಗಿರುವುದು ಕಂಡುಬಂದಿದೆ. ಮನೆಯೊಳಗಿದ್ದವರು ಹೊರಬಾರದಂತೆ ಬಾಗಿಲ ಚಿಲಕ ಹಾಕಿ, ತಕ್ಷಣವೇ ಶಿವಬಸಪ್ಪ ಅವರ ಬಾಯಿಗೆ ಬಟ್ಟೆ ತುರುಕಿ, ಕೈಕಾಲು ಕಟ್ಟಿ ಅನತಿ ದೂರಕ್ಕೆ ಎತ್ತೊಯ್ದಿದ್ದಾರೆ. ಬಳಿಕ ಕುತ್ತಿಗೆಗೆ ಟವೆಲ್ ಬಿಗಿದು ಹತ್ಯೆ ಮಾಡಿದ್ದಾರೆ.
ಶಿವಬಸಪ್ಪ ಅವರನ್ನು ಹತ್ಯೆಗೈಯ್ದ ನಂತರ ಮನೆ ಬಳಿ ಬಂದ ಖದೀಮರು ಶ್ರೀಗಂಧದ ಮರವನ್ನು ಕೊಯ್ಯಲು ಆರಂಭಿಸಿದ್ದಾರೆ. ಈ ಶಬ್ದ ಕೇಳಿ ಮನೆಯೊಳಗೆ ಮಲಗಿದ್ದ ಶಿವಬಸಪ್ಪ ಅವರ ಪುತ್ರ ಶಿವಕುಮಾರ್ ಮತ್ತಿತರರು ಹೊರಬರಲು ಯತ್ನಿಸಿದ್ದಾರೆ. ಆದರೆ ಹೊರಭಾಗದಿಂದ ಚಿಲಕ ಹಾಕಿದ್ದರಿಂದ ತಕ್ಷಣವೇ ಬರಲು ಸಾಧ್ಯವಾಗದೆ ಚಿಲಕ ಮುರಿದು ಹೊರಬಂದಿದ್ದಾರೆ.
ಹೊರ ಬರುತ್ತಿದ್ದಂತೆ ಮನೆಯ ಮುಂಭಾಗ ಮರ ಕೊಯ್ಯುತ್ತಿದ್ದವರು ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ತಮ್ಮ ತಂದೆ ಕಾಣದೆ ಇದ್ದಾಗ ಶಿವಕುಮಾರ್ ಕೂಗಿಕೊಂಡು ಗ್ರಾಮಸ್ಥರೊಡನೆ ಹುಡುಕಾಟ ನಡೆಸಿದಾಗ ಮನೆಯ ಸ್ವಲ್ಪ ದೂರದಲ್ಲಿ ಶಿವಬಸಪ್ಪ ಅವರ ಶವ ಪತ್ತೆಯಾಗಿದೆ.
ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.