ಬಾಲ್ಯವಿವಾಹವಾದ ಗಂಡ ಬೇಡವೆಂದು ಪ್ರಿಯಕರನ ಕೈಹಿಡಿದ ಯುವತಿ! | Janata news
ಬಾಗಲಕೋಟೆ : ತುಮಕೂರು ಮೂಲದ ಯುವತಿಯೊಬ್ಬಳು ಬಾಲ್ಯವಿವಾಹವನ್ನು ತ್ಯಜಿಸಿ ಪ್ರಿಯಕರನ ಕೈಹಿಡಿದಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೇಲನಳ್ಳಿ ಗ್ರಾಮದ ಯುವತಿ ಐಶ್ವರ್ಯಾ ಮನೆಬಿಟ್ಟು ಬಂದು ಬಾಗಲಕೋಟೆಯ ನವನಗರದ ನಿವಾಸಿ ಆಕಾಶ್ ಜತೆ ಮದುವೆಯಾಗಿದ್ದಾಳೆ.
ತುಮಕೂರು ಜಿಲ್ಲೆಯ ಮೂಲದ 21 ವರ್ಷದ ಐಶ್ವರ್ಯ ಬಾಗಲಕೋಟೆ ನವನಗರದ 26ವರ್ಷದ ಆಕಾಶ್ ಸೊನ್ನ ಎಂಬಾತನನ್ನು ಮದುವೆಯಾಗಿ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಮನೆಬಿಟ್ಟು ಬಂದಿರುವ ಮಗಳನ್ನು ಕರೆದೊಯ್ಯಲು ಬಂದಿರುವ ತಂದೆ ದೇವರಾಜ್ ಮಗಳ ಪ್ರಿಯಕರ ಆಕಾಶ್ ಕಾಲು ಹಿಡಿದು ಮಗಳನ್ನು ಕಳಿಸಿಕೊಡುವಂತೆ ಕಣ್ಣೀರು ಹಾಕಿದ್ದಾರೆ.
ಬಾಗಲಕೋಟೆ ನವನಗರದ ಆಕಾಶ್ ಸೊನ್ನ 2016ರಲ್ಲಿ ಚಿತ್ರದುರ್ಗಕ್ಕೆ ಪ್ರವಾಸಕ್ಕೆ ಹೋಗಿದ್ದಾನೆ. ಅದೇ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ಮೂಲದ ಐಶ್ವರ್ಯ ಕೂಡಾ ಚಿತ್ರದುರ್ಗಕ್ಕೆ ಪ್ರವಾಸಕ್ಕೆ ಹೋಗಿದ್ದಾಳೆ. ಆಗ ಇಬ್ಬರ ಮಧ್ಯೆ ಪರಿಚಯವಾಗಿದೆ. ಆಕಾಶ್ ಮೊಬೈಲ್ ನಂಬರ್ ಪಡೆದಿದ್ದ ಐಶ್ವರ್ಯ, ತನ್ನ ತಂದೆಯ ಮೊಬೈಲ್ ನಂಬರ್ ನಿಂದ ಆಕಾಶ್ ನೊಂದಿಗೆ ಮಾತನಾಡುತ್ತಾ ಇಬ್ಬರ ಮಧ್ಯೆ ಪ್ರೇಮ ಹುಟ್ಟಿದೆ.
ಬಳಿಕ ಪೋನ್ನಲ್ಲಿ ಇಬ್ಬರು ಸದಾ ಸಂಪರ್ಕದಲ್ಲಿದ್ದರು. ಆಗಾಗ ಯುವತಿ ಇದ್ದಲ್ಲಿಗೆ ಹೋಗಿ ಆಕಾಶ್ ಭೇಟಿ ಮಾಡುತ್ತಿದ್ದ. ಆದರೆ, 17 ವರ್ಷವಿದ್ದಾಗಲೇ ಯುವತಿಯನ್ನು ಬಾಲ್ಯವಿವಾಹ ಮಾಡಿಕೊಡಲಾಗಿತ್ತು.
ಬಳ್ಳಾರಿ ಮೂಲದ ಐಶ್ವರ್ಯ ಪತಿ, ಮಾಜಿ ಸಚಿವ ಸಂತೋಷ್ ಲಾಡ್ ಅವರ ಬೆಂಗಳೂರಿನ ಕಚೇರಿಯಲ್ಲಿ ಕೆಲ್ಸ ಮಾಡ್ತಿದ್ದಾನಂತೆ. ಪತಿ ಹಾಗೂ ಮಾವನ ಕಿರುಕುಳ ಹೆಚ್ಚಾಗಿ, ಒಮ್ಮೆ ನನಗೆ ಮಾವ ವಿಷ ಹಾಕಿ ಸಾಯಿಸಲು ಬಂದಿದ್ದರು ಎಂದು ಐಶ್ವರ್ಯ ಹೇಳುತ್ತಿದ್ದಾಳೆ.
ಮದುವೆಯಾದ ನಂತರವೂ ಪ್ರಿಯಕರ ಆಕಾಶ್ ಐಶ್ವರ್ಯ ಮಧ್ಯೆ ಸಂಪರ್ಕದಲ್ಲಿದ್ದರಂತೆ. ಆಗಾಗ ಇವರಿಬ್ಬರು ಬೆಂಗಳೂರಿನಲ್ಲಿ ಭೇಟಿ ಆಗುತ್ತಿದ್ದರಂತೆ. ಬೆಂಗಳೂರಿನಿಂದ ತನ್ನ ತವರೂರಿಗೆ ಬಂದಿದ್ದ ಐಶ್ವರ್ಯ ಎರಡು ದಿನಗಳ ಹಿಂದೆ ಯುವತಿ ಬಾಗಲಕೋಟೆಗೆ ಬಂದಿದ್ದಾಳೆ. ಇವತ್ತು ಮುಚಖಂಡಿ ವೀರಭದ್ರೇಶ್ವರ ದೇಗುಲದಲ್ಲಿ ಪ್ರಿಯಕರನೊಂದಿಗೆ ವಿವಾಹವಾಗಿದ್ದಾಳೆ.
ಮನೆಯವರನ್ನು ಧಿಕ್ಕರಿಸಿ ಮದುವೆಯಾಗಿರುವ ಕಾರಣ ನಮಗೆ ಕುಟುಂಬದವರಿಂದ ಜೀವ ಬೆದರಿಕೆ ಇದೆ. ರಕ್ಷಣೆ ನೀಡಿ ಎಂದು ಪ್ರೇಮಿಗಳು ಎಸ್ ಪಿ ಮೊರೆ ಹೋಗಿದ್ದಾರೆ.