ಡಿಕೆಶಿ ನಿವಾಸಕ್ಕೆ ಭೇಟಿ ಕೊಟ್ಟ ಜೆಡಿಎಸ್ ಮುಖಂಡ ಜಿ.ಟಿ ದೇವೇಗೌಡ! | Janata news
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮನೆ, ಕಚೇರಿ ಮೇಲೆ ಸಿಬಿಐ ದಾಳಿ ನಡೆದ ಹಿನ್ನೆಲೆಯಲ್ಲಿ ಅವರಿಗೆ ನೈತಿಕ ಬೆಂಬಲ ನೀಡುವ ಸಲುವಾಗಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಇಂದು ಡಿಕೆಶಿ ನಿವಾಸಕ್ಕೆ ಭೇಟಿ ನೀಡಿ ಧೈರ್ಯ ತುಂಬಿದರು.
ಡಿಕೆಶಿ ನಿವಾಸದ ಮೇಲೆ ನಡೆದ ದಾಳಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಉಪಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಉದ್ಧೇಶದಿಂದ ಈ ದಾಳಿ ನಡೆದಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಂಜಾವಧೂತ ಸ್ವಾಮೀಜಿ ಸೇರಿದಂತೆ ಮಠಾಧೀಶರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದೀಗ ಜೆಡಿಎಸ್ ಮುಖಂಡ ಜಿ.ಟಿ ದೇವೇಗೌಡ ಭೇಟಿ ಮಾಡಿ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.
ಭೇಟಿ ಬಳಿಕ ಜಿ.ಟಿ.ದೇವೇಗೌಡ ಮಾತನಾಡಿ, ಶಿವಕುಮಾರ್ ಅವರಿಗೆ ಸೇರಿದ 14 ಕಡೆಗಳಲ್ಲಿ ಸಿಬಿಐ ದಾಳಿ ನಡೆಸಿದ್ದು, ಪದೇ ಪದೇ ಈ ರೀತಿಯ ದಾಳಿಯಿಂದ ಶಿವಕುಮಾರ್ ಬಹಳ ನೊಂದಿದ್ದಾರೆ.
ಶಿವಕುಮಾರ್ ಹಾಗೂ ತಾವು ಬಹಳ ವರ್ಷದ ಸ್ನೇಹಿತರು, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೂ ದಾಳಿ ನಡೆದಿತ್ತು. ಐಟಿ ದಾಳಿ ನಡೆಸಿ ಶಿವಕುಮಾರ್ ಅವರನ್ನು ಬಂಧಿಸಿದ್ದರು. ಎಸ್. ಎಂ. ಕೃಷ್ಣಾ ಕಾಂಗ್ರೆಸ್ ಸಂಪುಟದಲ್ಲಿ ಶಿವಕುಮಾರ್ ತಮ್ಮನ್ನು ಮಹಾಮಂಡಲದ ಅಧ್ಯಕ್ಷರನ್ನಾಗಿ ಮಾಡಿದ್ದರು.
ಯಾವುದೇ ಸರ್ಕಾರ ಇರಲಿ ಯೋಚನೆ ಮಾಡಬೇಕು, ಚುನಾವಣೆ ಘೋಷಣೆಯಾದ ಬಳಿಕ ಈ ರೀತಿ ದಾಳಿ ಮಾಡಿಸುವುದು ಸರಿ ಅಲ್ಲ. ಡಿ.ಕೆ. ಶಿವಕುಮಾರ್ ಪತ್ನಿ ನಮ್ಮ ಮೈಸೂರಿನವರು ಅವರ ಕುಟುಂಬದ ಎಲ್ಲರಿಗೂ ಧೈರ್ಯ ತುಂಬಿದ್ದೇನೆ. ಇದು ರಾಜಕೀಯ ಪ್ರೇರಣೆ ದಾಳಿ ಎಂದು ಜನರು ಭಾವಿಸಿದ್ದಾರೆ ಎಂದರು.
ಡಿ.ಕೆ ಶಿವಕುಮಾರ್ ಮಾತನಾಡಿ, ಜಿ.ಟಿ. ದೇವೇಗೌಡ ತಮ್ಮ ಆತ್ಮೀಯ ಸ್ನೇಹಿತ. ರಾಜಕಾರಣವೇ ಬೇರೆ ಸ್ನೇಹವೇ ಬೇರೆ ಎಂದರು.