ಭಾರತೀಯ 88ನೇ ವಾಯುಸೇನಾ ದಿನ: ವೀರ ಯೋಧರಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್ | Janata news
ಬೆಂಗಳೂರು : 88ನೇ ವಾಯುಸೇನಾ ದಿನ ಹಿನ್ನಲೆಯಲ್ಲಿ ವಾಯುಪಡೆಯ ಧೀರ ಯೋಧರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗುರುವಾರ ಶುಭಾಶಯಗಳನ್ನು ಕೋರಿದ್ದಾರೆ.
1932, ಅ. 8ರಂದು ಭಾರತೀಯ ವಾಯು ಪಡೆಯನ್ನು ಸ್ಥಾಪಿಸಲಾಯಿತು. ಅಂದಿನಿಂದ ಪ್ರತೀ ವರ್ಷ ಅಕ್ಟೋಬರ್ 8ರಂದು ಹಲವು ಯುದ್ಧಗಳಲ್ಲಿ ಭಾರತೀಯ ವಾಯುಸೇನೆಯು ಸಲ್ಲಿಸಿದ ಅನುಪಮ ಸೇವೆಯನ್ನು ಸ್ಮರಿಸುವ ಹಾಗೂ ವೀರ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಭಾರತೀಯ ವಾಯುಪಡೆ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ವಾಯುಪಡೆಯ ದಿನದಂದು ಭಾರತೀಯ ವಾಯುಸೇನೆಯಯ ಎಲ್ಲಾ ವೀರ ಯೋಧರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ನೀವು ದೇಶದ ಆಗಸವನ್ನು ಸುರಕ್ಷಿತವಾಗಿರಿಸುವುದಲ್ಲದೆ, ವಿಪತ್ತು ಸಮಯದಲ್ಲಿ ಮಾನವೀಯತೆಯ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತೀರಿ. ಭಾರತಾಂಬೆ ರಕ್ಷಿಸಲು ನಿಮ್ಮ ಧೈರ್ಯ, ಶೌರ್ಯ ಮತ್ತು ಸಮರ್ಪಣೆ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರೂ ಯೋಧರಿಗೆ ಶುಭಾಶಗಳನ್ನು ಕೋರಿದ್ದು, ನಮ್ಮ ವಾಯುಪಡೆಯ ಯೋಧರು, ಮಾಜಿ ಯೋಧರು ಮತ್ತು ಭಾರತೀಯ ವಾಯುಪಡೆಯ ಕುಟುಂಬಸ್ಥರನ್ನು ನಾವು ಹೆಮ್ಮೆಯಿಂದ ಗೌರವಿಸುತ್ತೇವೆ. ನಮ್ಮ ಆಕಾಶವನ್ನು ಭದ್ರಪಡಿಸುವಲ್ಲಿ ಮತ್ತು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರದಲ್ಲಿ ನಾಗರಿಕರಿಗೆ ಸಹಾಯ ಮಾಡುವಲ್ಲಿ ಐಎಎಫ್ನ ಕೊಡುಗೆ ಅಪಾರವಾದದು ಎಂದು ಹೇಳಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಭಾಶಯಗಳನ್ನು ಕೋರಿದ್ದು, ರಾಷ್ಟ್ರವು ತನ್ನ ನೀಲಿ ಬಣ್ಣದ ಉಡುಗೆಯಲ್ಲಿರುವ ವಾಯುಸೇನೆಯ ಪುರುಷರು ಮತ್ತು ಮಹಿಳೆಯರ ಬಗ್ಗೆ ಹೆಮ್ಮೆಪಡುತ್ತದೆ . ಸವಾಲುಗಳನ್ನು ಎದುರಿಸಲು ಮತ್ತು ವಿರೋಧಿಗಳನ್ನು ಹಿಮ್ಮೆಟ್ಟಿಸಲು ಸಿದ್ಧವಾಗಿರುವುದರಿಂದ ಐಎಎಫ್ನ ಪರಾಕ್ರಮಕ್ಕೆ ನಮಸ್ಕರಿಸುತ್ತೇವೆ. ಆಧುನೀಕರಣ ಮತ್ತು ದೇಶೀಕರಣದ ಮೂಲಕ ಐಎಎಫ್ನ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ನಾವು ಬದ್ಧರಾಗಿದ್ದೇವೇ ಎಂದು ಹೇಳಿದರು.