ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ಚುನಾವಣೆ: ವಾಟಾಳ್ ನಾಮಪತ್ರ ಸಲ್ಲಿಕೆ! | Janata news
ಕಲಬುರ್ಗಿ : ಇದೇ ತಿಂಗಳು 28ರಂದು ನಡೆಯುವ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ವಾಟಾಳ್ ನಾಗರಾಜ ಕಲಬುರಗಿಯಲ್ಲಿ ದಿಢೀರ್ ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಇಲ್ಲಿನ ಮಿನಿ ವಿಧಾನಸೌಧದಲ್ಲಿ ಚುನಾವಣಾಧಿಕಾರಿ, ಪ್ರಾದೇಶಿಕ ಆಯುಕ್ತ ಡಾ. ಎನ್.ವಿ.ಪ್ರಸಾದ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಕಲಬುರ್ಗಿ, ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಉಪನ್ಯಾಸಕರು ಈಶಾನ್ಯ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಬೇಡಿಕೆ ಇಟ್ಟಿದ್ದರಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಬಂದಿರುವೆ. ಕಲ್ಯಾಣ ಕರ್ನಾಟಕ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಲು ಬಂದಿರುವುದಾಗಿ ತಿಳಿಸಿದರು.
ಸದ್ಯಕ್ಕೆ ಶಾಲಾ ಕಾಲೇಜು ಆರಂಭ ಬೇಡ ಬೇಡ ಎಂದ ಅವರು, ಕೋವಿಡ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಕ್ಕಳಿಗೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ವಿದ್ಯೆ ಬೇಕು, ಆದ್ರೆ ಪ್ರಾಣ ಅದಕ್ಕಿಂತ ಮುಖ್ಯ. ಪ್ರಾಣ ಇದ್ದರೆ ವಿದ್ಯೆ. ಪ್ರಾಣವೇ ಇಲ್ಲಂದ್ರೆ ವಿದ್ಯೆ ಎಲ್ಲಿಂದ ಎಂದು ಖಾರವಾಗಿ ಪ್ರಶ್ನಿಸಿದರು.
ಸಚಿವ ಸುರೇಶ್ ಕುಮಾರ ಮಕ್ಕಳ ಪ್ರಾಣದ ಜೊತೆ ಆಟ ಆಡಬಾರದು. ಸಚಿವರು ಗಂಭೀರವಾಗಿ ಚಿಂತಿಸಿ ಶಾಲಾ ಕಾಲೇಜು ಮುಂದೂಡಬೇಕು. ಯಾವುದೇ ಕಾರಣಕ್ಕೂ ಸದ್ಯಕ್ಕೆ ತೆಗೆಯಬಾರದು ಎಂದರು.
ಕೋವಿಡ್ ಸೋಂಕಿನಿಂದ ನಿತ್ಯ ಸಾವು ಹೆಚ್ಚುತ್ತಿವೆ. ಆದರೆ ಯಡಿಯೂರಪ್ಪ ಕೋವಿಡ್ ಕೈ ಬಿಟ್ಟಿದ್ದಾರೆ. ದುರಾಡಳಿತ ನಡೆಸುತ್ತಿದ್ದಾರೆ. ಸಾಯುವವರು ಸಾಯಲಿ. ನಾನು ನನ್ನ ಪಾಡಿಗೆ ಆರಾಮಾಗಿರ್ತಿನಿ ಎನ್ನುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.