ರಾಜಸ್ಥಾನ : ದೇವಾಲಯದ ಭೂ ಕಬಳಿಕೆ ವಿರೋಧಿಸಿದ ಅರ್ಚಕನನ್ನು ಜೀವಂತ ಸುಟ್ಟು ಕೊಂದರು | Janata news
ಕರೌಲಿ : ದೇವಾಲಯದ ಭೂ ಕಬಳಿಕೆ ವಿರೋಧಿಸಿದ ದೇವಾಲಯದ ಅರ್ಚಕರೊಬ್ಬರನ್ನು ಕೆಲವು ದುಷ್ಕರ್ಮಿಗಳು ಸೇರಿ ಜೀವಂತವಾಗಿ ಸುಟ್ಟುಹಾಕಿದ ಅಮಾನವೀಯ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ನಿನ್ನೆ ಗುರುವಾರ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಯೋರ್ವನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ ಮತ್ತು ದೇವಾಲಯದ ಅರ್ಚಕರ ಮೇಲೆ ಹಲ್ಲೆ ನಡೆಸಿ ಜೀವಂತವಾಗಿ ಸುಟ್ಟುಹಾಕಿದ ಇತರ ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ, ಎನ್ನಲಾಗಿದೆ.
ರಾಜಸ್ಥಾನದ ಕರೌಲಿ ಜಿಲ್ಲೆಯ ಸಪೋತ್ರಾದ ಬುಕ್ನಾ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದೆ. ಘಟನೆಯ ಬಳಿಕ ದೇವಾಲಯದ ಅರ್ಚಕರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಆದರೂ, ಗುರುವಾರ ರಾತ್ರಿ ತೀವ್ರವಾದ ಸುಟ್ಟ ಗಾಯಗಳಿಂದಾಗಿ ಅರ್ಚಕ ಮೃತಪಟ್ಟಿದ್ದಾರೆ, ಎನ್ನಲಾಗಿದೆ.
ಈ ಘಟನೆ ಕುರಿತು ಅಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು, ಇಂದು ಕರೌಲಿಯಲ್ಲಿ, ದೇವಾಲಯದ ಅರ್ಚಕನನ್ನು ದೇವಾಲಯಕ್ಕೆ ಸೇರಿದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಯಸಿದ ಗೂಂಡಾಗಳು ಜೀವಂತವಾಗಿ ಸುಟ್ಟುಹಾಕಿದರು. ರಾಜಸ್ಥಾನದ ಎಲ್ಲಾ ಭಾಗಗಳಿಂದ ಅತ್ಯಾಚಾರದ ಘಟನೆಗಳು ವರದಿಯಾಗುತ್ತಿವೆ, ಎಂದು ಕಳವಳ ವ್ಯಕ್ತ ಪಡಿಸಿದ್ದಾರೆ.
ಅಲ್ಲದೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜಕೀಯ ಪ್ರವಾಸಗಳಿಗೆ ಹೋಗುವ ಬದಲು ಈ ವಿಷಯಗಳ ಬಗ್ಗೆ ಅರಿವು ಮೂಡಿಸಬೇಕು. ಅವರು ರಾಜಸ್ಥಾನ ಸರ್ಕಾರವನ್ನು ರಾಜೀನಾಮೆ ನೀಡುವಂತೆ ಕೇಳಬೇಕು ಅಥವಾ ಅದರ ಸುಧಾರಣೆಗೆ ಪ್ರಯತ್ನಿಸಬೇಕು. ಅವರು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಒತ್ತಾಯಿಸಿದ್ದಾರೆ.