ಮಗುವಿನ ಸಾವು ಅದು ಕೇವಲ ಸಾವು ಆಗುವುದಿಲ್ಲ, ಸಮಾಜ ನಡೆಸಿದ ಕಗ್ಗೊಲೆ ಆಗುತ್ತದೆ: ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಗೆ ಪತ್ರ | Janata news
ಬೆಂಗಳೂರು : ಕೋವಿಡ್-19 ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಶಾಲೆಗಳನ್ನು ಯಾವ ಕಾರಣಕ್ಕೂ ತೆರೆಯಬಾರದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಕೊರೊನಾ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ದೇಶದ ಉಳಿದೆಡೆಗಿಂತ ಕರ್ನಾಟಕದಲ್ಲಿ ಭೀಕರ ಪ್ರಮಾಣದಲ್ಲಿ ಸೋಂಕು ಏರಿಕೆಯಾಗುತ್ತಿದೆ. ಟೆಸ್ಟ್ಗಳ ಸಂಖ್ಯೆ ಹೆಚ್ಚಿದಂತೆಲ್ಲಾ ಪ್ರಕರಣಗಳ ಸಂಖ್ಯೆ ಹೆಚ್ಚು ಪತ್ತೆಯಾಗುತ್ತಿರುವುದು ಆತಂಕ ಹುಟ್ಟಿಸುತ್ತಿದೆ. ತಜ್ಞರ ಮಾತುಗಳ ಪ್ರಕಾರ, ಈ ವರ್ಷ ಜೀವ ಉಳಿಸಿಕೊಳ್ಳಬೇಕು. ಇದರ ಹೊರತು ಉಳಿದೆಲ್ಲವನ್ನೂ ನಗಣ್ಯವೆಂದು ಭಾವಿಸಬೇಕು.
ಹಿಂದೆ ವಿವಿಧ ತರಗತಿಗಳಿಗೆ ಪರೀಕ್ಷೆಗಳನ್ನು ನಡೆಸುವ ಸಂದರ್ಭದಲ್ಲಿ ಸ್ವತಃ ನಾನೇ ಬೆಂಬಲಿಸಿದ್ದೇನೆ. ಆದರೆ ಇಂದಿನ ಪರಿಸ್ಥಿತಿಯೆ ಬೇರೆಯಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ಗೆ ಪತ್ರ ಬರೆದು ವಿರೋಧ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಬೆನ್ನನ್ನು ಜನರು ತಟ್ಟಬೇಕೇ ಹೊರತು ಸರ್ಕಾರ ತಟ್ಟಿಕೊಂಡರೆ ಹಾಸ್ಯಾಸ್ಪದವಾಗುತ್ತದೆ. ಸರ್ಕಾರಿ ದಾಖಲೆಗಳ ಪ್ರಕಾರ, 10 ವರ್ಷದೊಳಗಿನ 20,256 ಮಕ್ಕಳು ಮತ್ತು 11 ರಿಂದ 20 ವರ್ಷದೊಳಗಿನ 47,061 ಮಕ್ಕಳು ಈಗಾಗಲೇ ಕೊರೊನಾ ಸೋಂಕಿತರಾಗಿದ್ದಾರೆ. ಈ ಎರಡೂ ಗುಂಪಿನಿಂದ 61 ಮಕ್ಕಳು ಮೃತಪಟ್ಟಿದ್ದಾರೆ.
ಸರ್ಕಾರ ಕೊರೊನಾ ಸಾವುಗಳ ಸಂಖ್ಯೆಯನ್ನು ದೊಡ್ಡ ಮಟ್ಟದಲ್ಲಿ ಮುಚ್ಚಿಡುತ್ತಿದೆ ಎಂಬ ಮಾಹಿತಿ ನಮಗೆ ಇದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದುವರೆಗೆ 99 ಜನ ಮೃತಪಟ್ಟಿದ್ದಾರೆಂದು ಸರ್ಕಾರ ಹೇಳುತ್ತಿದೆ. ನನಗಿರುವ ಅಧಿಕೃತ ಮಾಹಿತಿಯ ಪ್ರಕಾರ, ಹೊಸಕೋಟೆಯಲ್ಲಿ ಸುಮಾರು 80 ಜನ, ನೆಲಮಂಗಲದಲ್ಲಿ 40 ಜನ, ದೇವನಹಳ್ಳಿಯ 50 ಕ್ಕಿಂತ ಹೆಚ್ಚು ಜನ ಮೃತಪಟ್ಟಿದ್ದಾರೆ. ಈ ಕುರಿತು ನಿಮಗೆ ನಂಬಿಕೆ ಇಲ್ಲದಿದ್ದರೆ ತಾಲ್ಲೂಕು ಆರೋಗ್ಯಾಧಿಕಾರಿಗಳನ್ನು ಕೇಳಿ ನೋಡಿ ಸತ್ಯ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಶಹಭಾಸ್ಗಿರಿ ಪಡೆಯಲು ಸರ್ಕಾರ ಇಂತಹ ಅಮಾನವೀಯ ಕೃತ್ಯಕ್ಕೆ ಇಳಿದಿರುವುದು ಕ್ಷಮಿಸಲಾಗದ ಕ್ರಿಮಿನಲ್ ಸಂಗತಿಯಾಗುತ್ತದೆ. ಈ ವಿಚಾರಗಳು ನಿಮ್ಮ ಗಮನಕ್ಕೆ ಮತ್ತು ಮಕ್ಕಳ ಆಯೋಗದ ಗಮನಕ್ಕೆ ಬಂದಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆ, ದೈಹಿಕ ಅಂತರ ಕಾಯ್ದುಕೊಳ್ಳುವುದನ್ನು ಮಕ್ಕಳಿಂದ ನಿರೀಕ್ಷಿಸುವುದು ಅಸಾಧ್ಯದ ವಿಚಾರ. ಇಷ್ಟು ದಿನ ಮನೆಯಲ್ಲಿದ್ದ ಮಕ್ಕಳು ಶಾಲೆಗೆ ಬಂದ ಕೂಡಲೇ ಎಲ್ಲಾ ನಿಯಮಗಳನ್ನು ಗಾಳಿಗೆ ತೂರುತ್ತವೆ.
ಇಲ್ಲದೆ ದುಡಿಯುವ ಕುಟುಂಬಗಳಿಗೆ ಮಕ್ಕಳ ಪಾಲನೆ ಮಾಡುವವರಲ್ಲಿ ಬಹುಪಾಲು ಸಂದರ್ಭಗಳಲ್ಲಿ ಅಜ್ಜ-ಅಜ್ಜಿಯರಾಗಿರುತ್ತಾರೆ ಅಥವಾ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಮನೆಗಳಲ್ಲಿ ಉಳಿದುಕೊಂಡವರಾಗಿರುತ್ತಾರೆ. ಮಕ್ಕಳು ಶಾಲೆಗೆ ಹೋಗಿ ಕೊರೊನಾ ಅಂಟಿಸಿಕೊಂಡು ಬಂದರೆ ಮಕ್ಕಳು ಸಮಸ್ಯೆಗೆ ತುತ್ತಾಗುವುದರ ಜೊತೆಗೆ, ಈ ರೋಗದಿಂದ ಹೆಚ್ಚು ಬಾಧಿತರಾಗುತ್ತಿರುವ ಹಿರಿಯ ಜೀವಗಳು ಮತ್ತು ಇತರ ಆರೋಗ್ಯ ಸಂಬಂಧಿತ ಸಮಸ್ಯೆಗಳಿರುವವರು ತೀವ್ರ ಸಂಕಷ್ಟಕ್ಕೊಳಗಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಒಂದು ಸಮಸ್ಯೆಯನ್ನು ಎದುರಿಸಲು ಮಕ್ಕಳನ್ನು ಯಮನ ಬಾಯಿಗೆ ತಳ್ಳುವುದನ್ನು ಯಾವ ಸೂಕ್ಷ್ಮ ಮತಿಯಾದ ಮನುಷ್ಯನಿಂದ ಊಹಿಸಿಕೊಳ್ಳಲಾಗದು. ಸರ್ಕಾರ ನಿರ್ಲಕ್ಷ್ಯದಿಂದ ಮತ್ತು ತಪ್ಪು ನಿರ್ಧಾರಗಳ ಕಾರಣದಿಂದಾಗಿ ಮೃತಪಟ್ಟ ಮಗುವಿನ ಸಾವು ಅದು ಕೇವಲ ಸಾವು ಆಗುವುದಿಲ್ಲ. ಸಮಾಜ ನಡೆಸಿದ ಕಗ್ಗೊಲೆ ಆಗುತ್ತದೆ. ಮೃತಪಟ್ಟ ಮಗುವಿನ ಕುಟುಂಬದ ನೋವನ್ನು ಊಹಿಸಿಕೊಳ್ಳಲು ನನ್ನಿಂದ ಸಾಧ್ಯವಾಗುವುದಿಲ್ಲ.
ಯಾವ ಕಾರಣಕ್ಕೂ ಹಾಗೆ ಆಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ತಿಳಿಸಿದ್ದಾರೆ.ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಶಾಲೆಗಳನ್ನು ಯಾವ ಕಾರಣಕ್ಕೂ ತೆರೆಯಬಾರದೆಂದು ಆಗ್ರಹಿಸುತ್ತೇನೆ.
ಪ್ರಸ್ತುತ ಶೈಕ್ಷಣಿಕ ವರ್ಷದ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಿ ಮುಂದಿನ ತರಗತಿಗಳಿಗೆ ಕಳುಹಿಸಬೇಕೆಂದು ಮತ್ತು ಪರಿಸ್ಥಿತಿ ಹತೋಟಿಗೆ ಬಂದ ನಂತರ ಮತ್ತೊಮ್ಮೆ ಎಲ್ಲರ ಅಭಿಪ್ರಾಯಗಳನ್ನು ಪಡೆದು ಶಾಲೆಗಳನ್ನು ಪ್ರಾರಂಭಿಸಬಹುದೆಂದು ಸಲಹೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ, ಸಚಿವ ಸುರೇಶ್ ಕುಮಾರ್ ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.