ಕೆಲ ಕೇಂದ್ರ ಸಚಿವರು, ಸಂಸದರು ಕೊರೊನಾಗೆ ಬಲಿಯಾದ್ದಾರೆ ಎಂದು ಸಂಸತ್ತನ್ನು ಮುಚ್ಚಿದ್ದಾರಾ?: ಈಶ್ವರಪ್ಪ ಪ್ರಶ್ನೆ | Janata news
ಬೆಂಗಳೂರು : ಕೊರೊನಾದಿಂದ ಕೆಲ ಕೇಂದ್ರ ಸಚಿವರು, ಸಂಸದರು ನಿಧನರಾದ್ರು. ಹಾಗಂತ ಲೋಕಸಭೆ ಮುಚ್ಚಕ್ಕಾಗುತ್ತಾ?, ರೈತರೂ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಹಾಗಂತ ಉಳುಮೆ ಮಾಡೋದನ್ನು ನಿಲ್ಲಿಸಿ ಅಂದ್ರೆ ಆಗುತ್ತಾ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿಕ್ಷಕರಿಂದ ಕೆಲವು ಮಕ್ಕಳಿಗೆ ಕರೊನಾ ಸೋಂಕು ಹರಡಿರುವ ಘಟನೆಯೇ ಇದಕ್ಕೆ ಕಾರಣ. ಇದರಿಂದಾಗಿ ತೀವ್ರ ಚಿಂತೆಗೆ ಒಳಗಾಗಿರುವ ಪಾಲಕರು ವಿದ್ಯಾಗಮ ಯೋಜನೆಯನ್ನೇ ನಿಲ್ಲಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪ, ವಿದ್ಯಾಗಮ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ ಪ್ರಶ್ನೆಯೆ ಇಲ್ಲ. ಕೆಲವು ಮಕ್ಕಳಿಗೆ, ಶಿಕ್ಷಕರಿಗೆ ಸೋಂಕು ತಗುಲಿತು ಎಂಬ ಕಾರಣಕ್ಕೆ ಇಡೀ ಯೋಜನೆಯನ್ನೇ ನಿಲ್ಲಿಸಲು ಆಗುವುದಿಲ್ಲ. ಕರೊನಾದಿಂದಾಗಿ ಕೆಲವು ರೈತರು ಸತ್ತಿದ್ದಾರೆ. ಹಾಗಂತ ಎಲ್ಲಿಯಾದರೂ ಕೃಷಿ ಚಟುವಟಿಕೆಯನ್ನು ನಿಲ್ಲಿಸಿದ್ದಾರಾ? ಕರೊನಾ ಬಂದು ಕೇಂದ್ರ ಸಚಿವರು, ಸಂಸದರು ಮೃತಪಟ್ಟಿದ್ದೂ ಇದೆ. ಹಾಗಂತ ಸಂಸತ್ತನ್ನೇ ಮುಚ್ಚಿದ್ದಾರಾ? ಎಂದು ಪ್ರಶ್ನಿಸಿದರು.
ವಿದ್ಯಾಗಮ ಯೋಜನೆಯಿಂದಲೇ ಕರೊನಾ ಬಂತು ಅಂತ ಯಾಕೆ ಭಾವಿಸುತ್ತೀರಿ? ಆ ಯೋಜನೆ ಇಲ್ಲದೇ ಇದ್ದಾಗಲೂ ಸಾಕಷ್ಟು ಜನ ಶಿಕ್ಷಕರಿಗೆ, ಮಕ್ಕಳಿಗೆ ಕರೊನಾ ಸೋಂಕು ತಗುಲಿಲ್ಲವೇ? ಒಂದು ಯೋಜನೆ ಬೇಡವಾದ ಕಾರಣದಿಂದಾಗಿ ಅದಕ್ಕೆ ಕರೊನಾ ಲಿಂಕ್ ಹಚ್ಚಬಾರದು ಎಂದು ಹೇಳಿದರು.
ರಾಜ್ಯದಲ್ಲಿ ಶಾಲೆಗಳ ಆರಂಭ ಮಾಡಬೇಕಾ ಬೇಡವಾ ಅನ್ನುವ ಚರ್ಚೆ ನಡೀತಿದೆ. ಶಾಲಾರಂಭ ಬಗ್ಗೆ ಸರ್ಕಾರ ಎಲ್ಲರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೆ. ಪೋಷಕರು, ತಜ್ಞರ ಜೊತೆ ಸರ್ಕಾರ ಚರ್ಚೆ ಮಾಡ್ತಿದೆ. ಎಲ್ಲರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ತಗೊಳ್ಳುತ್ತೆ. ನನ್ನ ವೈಯಕ್ತಿಕ ಅಭಿಪ್ರಾಯ ಶಾಲೆ ಆರಂಭ ಬೇಡ ಏನ್ನೋದಾಗಿದೆ ಎಂದರು.