ರಾಜಕೀಯದಲ್ಲಿ ಬೇರೆಯವರ ಹೆಸರು ಬಳಸಿಕೊಳ್ಳದೆ ಯಾರು ತಾನೇ ಗೆದ್ದಿದ್ದಾರೆ? | Janata news
ಬೆಂಗಳೂರು : ಡಿ.ಕೆ ರವಿ ಹೆಸರನ್ನು ಯಾರು ಬಳಸಿಕೊಂಡರೂ ಅವರಿಗೆ ಒಳ್ಳೆದಾಗಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ನೀಡಿದ್ದ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕಿಯರು ಹರಿಹಾಯ್ದಿದ್ದಾರೆ.
ಯಾರೂ ಕೂಡ ರಾಜಕೀಯದಲ್ಲಿ ಯಾರ ಹೆಸರು ಬಳಸಿಕೊಳ್ಳದೇ ಗೆದ್ದಿಲ್ಲ. ಕುಸುಮಾ ಅವರು ಡಿ.ಕೆ.ರವಿಯವರನ್ನು ಅಧಿಕೃತವಾಗಿ ಸಪ್ತಪದಿ ತುಳಿದು ಮದುವೆಯಾಗಿದ್ದಾರೆ. ಅವರ ಗಂಡನ ಹೆಸರು ಬಳಕೆ ಮಾಡಿಕೊಳ್ಳಬಾರದು ಎಂದು ಹೇಳಲು ಇವರು ಯಾರು. ಆ ರೀತಿ ಹೇಳುವ ಹಕ್ಕು ಯಾರಿಗೂ ಇಲ್ಲ. ಕುಸುಮಾ ವೈಫ್ ಆಫ್ ಡಿ.ಕೆ.ರವಿ. ಇದನ್ನು ಹೇಳಬೇಕು ತಾನೇ..?
ನೋವುಂಡವರ ನೋವು ಅವರಿಗೆ ಮಾತ್ರ ಗೊತ್ತು. ಶೋಭಾ ಕರಂದ್ಲಾಜೆ ಒಂದೇ ದಿಕ್ಕಿನಲ್ಲಿ ಯೋಚಿಸಬಾರದು. ಸಣ್ಣ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡ ಹೆಣ್ಣು ಮಗಳು ಕುಸುಮಾ, ಅವರ ನೋವು ಯಾರಿಗೆ ಅರ್ಥವಾಗುತ್ತೆ. ನೋವನ್ನು ಮರೆತು ಸಾಮಾಜಿಕ ಸೇವೆಗೆ ಬಂದಿದ್ದಾರೆ. ಅಂಥವರ ಬಗ್ಗೆ ಹೀಗೆ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ಶೋಭ ಕರಂದ್ಲಾಜೆ ಜ್ಯೋತಿಷಿ ಅಲ್ಲ, ಸಂಸದೆ ಅನ್ನೋದನ್ನ ನೆನಪಿಸಿಕೊಳ್ಳಲಿ ಎಂದು ಗುಡುಗಿದ್ರು. ಗಂಡ ಸತ್ತವರು ಎಲೆಕ್ಷನ್ಗೆ ನಿಲ್ಲಬಾರದು, ಗಂಡ ಬಿಟ್ಟವರು ಎಲೆಕ್ಷನ್ಗೆ ನಿಲ್ಲಬಾರದು ಅಂತ ಸಂವಿಧಾನದಲ್ಲಿ ಎಲ್ಲೂ ಬರೆದಿಲ್ಲ, ರಾಜಕೀಯಕ್ಕೆ ಬರೋದು, ಚುನಾವಣೆಗೆ ನಿಲ್ಲೋದು ಮಹಿಳೆಯರ ಹಕ್ಕು ಎಂದು ಉಮಾಶ್ರೀ ಹೇಳಿದರು.
ಶೋಭಾ ಕರಂದ್ಲಾಜೆ ಅವರಿಗೆ ತಮ್ಮ ತಂದೆ ನೋವಿನ ಬಗ್ಗೆ ಅರಿವಿರಬಹುದು. ಆದರೆ ಗಂಡನನ್ನು ಕಳೆದುಕೊಂಡ ಹೆಣ್ಣಿನ ಏಕಾಂಗಿತನ, ಅವರ ನೋವು ಇವರಿಗೆ ಅರ್ಥವಾಗುವುದಿಲ್ಲ ಎಂದು ಟೀಕಿಸಿದರು.
ಶೋಭಾ ಕರಂದ್ಲಾಜೆ ಹೆಣ್ಣು ಮಕ್ಕಳ ನೋವಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಅಭಿವೃದ್ಧಿ ಮಾಡಲಾಗದೆ ಜನರನ್ನು ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ರಾಜಕೀಯ ಮಾಡಿಕೊಂಡು ಬರುತ್ತಿದ್ದಾರೆ. ರಾಜಕೀಯವಾಗಿ ಯಾವ ಹೆಣ್ಣು ಚುನಾವಣೆಗೆ ನಿಲ್ಲಬಾರದೆಂಬ ಯಾವುದೇ ಕಟ್ಟುಪಾಡುಗಳು ಇಲ್ಲ. ಗಂಡ ಬಿಟ್ಟವರು, ವಿಧವೆಯಾದವರು ಚುನಾವಣೆಗೆ ನಿಲ್ಲಬಾರದು ಎಂದು ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ ಎಂದು ಉಮಾಶ್ರೀ ಖಾರವಾಗಿ ಪ್ರತಿಕ್ರಿಯಿಸಿದರು.