ಕೋರ್ಟ್ ಆದೇಶದಂತೆ ನಟಿ ಕಂಗನಾ ವಿರುದ್ಧ ತುಮಕೂರಲ್ಲಿ ದಾಖಲಾಯ್ತು ಎಫ್ಐಆರ್ | Janata news
ತುಮಕೂರು : ನೂತನ ಕೃಷಿ ಕಾನೂನು ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದ ವೇಳೆ ಟ್ವಿಟರ್ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ಆರೋಪ ಹೊತ್ತ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ನಗರದ ಕ್ಯಾತಸಂದ್ರ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ಕಂಗನಾ ಅವರು ಟ್ವಿಟರ್ ನಲ್ಲಿ ರೈತರನ್ನ ಭಯೋತ್ಪಾದಕರು ಎಂದು ನಿಂದಿಸಿದ್ದಾರೆ ಎಂದು ಆರೋಪಿಸಿ ವಕೀಲ ರಮೇಶ್ ನಾಯ್ಕ್, ಜೆಎಂಎಫ್ಸಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಕೋರ್ಟ್ ನಿರ್ದೇಶನ ಮೇರೆಗೆ ನಟಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅಕ್ಟೋಬರ್.12ರಂದು ತುಮಕೂರಿನ ಪಿಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಲ್ಲಿಕೆಯಾದಂತ ಪಿಸಿಆರ್ ಸಂಖ್ಯೆ 452/2020 ರಲ್ಲಿನ ಫಿರಿಯಾದಿ ರಮೇಶ್ ನಾಯ್ಕ ಎಂಬುವರು ಕೊಟ್ಟಿರುವ ದೂರಿನಲ್ಲಿ, ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಬಗ್ಗೆ ಟ್ವೀಟ್ ಮಾಡಿದ್ದ ಕಂಗನಾ ರಣಾವತ್, ಮಸೂದೆಯನ್ನ ವಿರೋಧಿಸುತ್ತಿರುವವರು ಟೆರರಿಸ್ಟ್ಗಳು ಎಂದು ಹೇಳಿದ್ದರು. ಹೈಕೋರ್ಟ್ ವಕೀಲ ರಮೇಶ್ ನಾಯ್ಕ್ ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಜೆಎಂಎಫ್ಸಿ ನ್ಯಾಯಾಲಯವು ಕಂಗನಾ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಲು ಕೋರ್ಟ್ ಆದೇಶಿಸಿತ್ತು.
ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ ಎಂದು ಆರೋಪಿಸಿದ್ದ ರಮೇಶ್ ಅವರು ನೇರವಾಗಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇದೀಗ ಎಫ್ಐಆರ್ ದಾಖಲು ಮಾಡಲಾಗಿದೆ.