ಸಿಗಂದೂರು ದೇವಾಲಯದಲ್ಲಿ ಅರ್ಚಕರು-ಧರ್ಮದರ್ಶಿಗಳ ನಡುವೆ ಮಾರಾಮಾರಿ; ಭಕ್ತರ ಮೇಲೂ ಹಲ್ಲೆ! | Janata news
ಶಿವಮೊಗ್ಗ : ಜಿಲ್ಲೆಯ ಸಿಗಂದೂರು ದೇವಾಲಯದಲ್ಲಿ ಎರಡು ಬಣಗಳ ನಡುವೆ ಮಾತಿನ ಚಕಮಕಿ ಬೆಳೆದು ಪರಸ್ಪರ ಹಲ್ಲೆ ನಡೆಸಿಕೊಂಡ ಘಟನೆ ನಡೆದಿದೆ.
ದೇವಸ್ಥಾನ ಆಡಳಿತ ಮಂಡಳಿಯ ಒಳ ಜಗಳ ಸ್ಫೋಟಗೊಂಡಿದ್ದು, ಸಿಗಂಧೂರು ಧರ್ಮದರ್ಶಿ ರಾಮಪ್ಪ ಬೆಂಬಲಿಗರ ಮೇಲೆ ಪ್ರಧಾನ ಅರ್ಚಕ ಶೇಷಗಿರಿ ಭಟ್ಟರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ದೇವಾಲಯಕ್ಕೆ ಪೂಜೆ ಮಾಡಿಸಲು ಬಂದಿದ್ದ ಭಕ್ತರ ಮೇಲೂ ಹಲ್ಲೆಯಾಗಿದೆ. ದೇವಾಲಯದ ಆಡಳಿತ ಕಚೇರಿಯ ಗ್ಲಾಸ್ಗಳು, ಪೀಠೋಪಕರಣ ಧ್ವಂಸ ಮಾಡಿದ್ದಾರೆ.
ಪರಿಸ್ಥಿತಿ ಕೈಮೀರುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಪೊಲೀಸರು, ಹತೋಟಿಗೆ ತಂದಿದ್ದಾರೆ.
ಅರ್ಚಕರು ಹಾಗೂ ಧರ್ಮದರ್ಶಿಗಳು ನಡುವೆ ಸುಮಾರು ದಿನಗಳಿಂದ ದೇಗುಲಕ್ಕೆ ಸಂಬಂಧಪಟ್ಟಂತೆ ಮುಸುಕಿನ ಗುದ್ದಾಟ ಇತ್ತು ಎನ್ನಲಾಗಿದೆ
ನವರಾತ್ರಿ ಚಂಡಿಕಾ ಹೋಮ ನಡೆಸಲು ಧರ್ಮದರ್ಶಿ ಮಂಡಳಿ ಅಡ್ಡಿ ಪಡಿಸುತ್ತಿದೆ ಎಂದು ಸಿಗಂಧೂರು ದೇವಸ್ಥಾನದ ಪ್ರಧಾನ ಅರ್ಚಕ ಶೇಷಗಿರಿ ಭಟ್ ಕುಟುಂಬಸ್ಥರೊಂದಿಗೆ ಶುಕ್ರವಾರ ಬೆಳಗ್ಗೆ ಚೌಡೇಶ್ವರಿ ದೇವಿ ಎದುರು ಮೌನ ಪ್ರತಿಭಟನೆ ನಡೆಸುತ್ತಿದ್ದರು.
ಈ ವೇಳೆ ಧರ್ಮದರ್ಶಿ ರಾಮಪ್ಪ ಕಡೆಯ ಮಂಜಯ್ಯ ಜೈನ್ ಎಂಬುವವರು ದೇವರ ದರ್ಶನ ಪಡೆಯಲೆಂದು ಬಂದಿದ್ದರು. ಆಗ ಅವರ ಮೇಲೆ ಶೇಷಗಿರಿ ಭಟ್ಟರ ಸಹೋದರರು ಹಲ್ಲೆ ನಡೆಸಿದ್ದಾರೆ.
ಸದ್ಯ ದೇವಾಲಯದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.