ಪತಿಯ ಊಟದಲ್ಲಿ ನಿದ್ದೆ ಮಾತ್ರೆ ಬೆರೆಸಿ ಬರ್ಬರ ಹತ್ಯೆ! | Janata news
ದಾವಣಗೆರೆ : ಹೆಂಡತಿಯೊಬ್ಬಳು ತನ್ನ ಗಂಡನ ಹತ್ಯೆಗೆ ಸುಪಾರಿ ನೀಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಆಹಾರದಲ್ಲಿ ನಿದ್ದೆ ಮಾತ್ರೆ ಬೆರೆಸಿ, ಮೂವರ ಜೊತೆ ಸೇರಿ ಪತಿಯ ಕೊಲೆ ಮಾಡಿದ ಮಹಿಳೆಯನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಜಿಲ್ಲೆ ಜಗಳೂರಿನ ಬಿದರಕೆರೆ ರಸ್ತೆಯ ಅಶ್ವತರೆಡ್ಡಿ ನಗರದ ಮುಖ್ಯ ರಸ್ತೆ ಬದಿಯಲ್ಲಿ ಬೆಳ್ಳಬೆಳಗ್ಗೆ ರುಂಡ ಕತ್ತರಿಸಿದ ರೀತಿಯಲ್ಲಿ ಶವವೊಂದು ಪತ್ತೆಯಾಗಿತ್ತು. ಬೆಳಗಿನ ವಾಕಿಂಗ್ಗೆಂದು ಹೋದವರು ಭೀಕರವಾಗಿ ಕೊಲೆಯಾಗಿ ಬಿದ್ದ ಶವ ನೋಡಿ ಬೆಚ್ಚಿ ಬಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕೊಲೆ ಪ್ರಕರಣ ಸಂಬಂಧ ಬಸವರಾಜಪ್ಪನ ಪತ್ನಿ ಭಾಗ್ಯಮ್ಮ, ಜಗಳೂರು ತಾಲ್ಲೂಕಿನ ಗುಡ್ಡದ ನಿಂಗನಹಳ್ಳಿ ಗ್ರಾಮದ ಅಂಜಿನಪ್ಪ, ಚೌಡಪ್ಪ, ಆಟೊ ಚಾಲಕ ಮಾರುತಿ ಅವರನ್ನು ಬಂಧಿಸಲಾಗಿದೆ.
ಬಸವರಾಜಪ್ಪ ಅವರಿಗೆ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇತ್ತು. ಇದನ್ನು ಪತ್ನಿ ಭಾಗ್ಯಮ್ಮ ಪ್ರಶ್ನಿಸುತ್ತಿದ್ದರು. ಇದರಿಂದ ಪ್ರತಿದಿನ ಗಲಾಟೆ ನಡೆಯುತ್ತಿತ್ತು. ಇದರಿಂದ ಭಾಗ್ಯಮ್ಮ ಪತಿಯ ಕೊಲೆಗೆ ಯೋಜಿಸಿದ್ದರು. ಎಗ್ ರೈಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಂಜಿನಪ್ಪ, ಆಟೊ ಚಾಲಕ ಮಾರುತಿ, ಜೌಡಪ್ಪರಿಗೆ ಪತಿಯನ್ನು ಕೊಲೆ ಮಾಡಿದರೆ 1 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿ ಸಂಚು ರೂಪಿಸಿದ್ದರು ಎನ್ನಲಾಗಿದೆ.
ಗುಡ್ಡದನಿಂಗನಹಳ್ಳಿ ನಿವಾಸಿಗಳಾದ ಆಟೋ ಚಾಲಕ ಮಾರುತಿ ಹಾಗೂ ಕುರಿಗಾಹಿ ಚೌಡಪ್ಪ ಈ ಕೃತ್ಯದಲ್ಲಿ ಅಂಜನಿಗೆ ಸಾಥ್ ನೀಡಿದ್ದರು. ಪೂರ್ವ ನಿಯೋಜಿತ ಪ್ಲಾನ್ನಂತೆ, ಮೆಡಿಕಲ್ ಶಾಪ್ನಿಂದ ನಿದ್ರೆ ಮಾತ್ರೆ ಖರೀದಿ ಮಾಡಿದ್ದರು. ಮಂಗಳವಾರ ರಾತ್ರಿ ಬಸವರಾಜನಿಗೆ ಗೊತ್ತಿಲ್ಲದಂತೆ ರಾಗಿ ಮುದ್ದೆಯಲ್ಲಿ 10 ನಿದ್ರೆ ಮಾತ್ರೆ ಹಾಕಿದ್ದರು..
ನಿದ್ರೆಯ ಮಂಪರಿನಲ್ಲಿದ್ದ ಬಸವರಾಜನ್ನು ತಡರಾತ್ರಿ ಆಟೋದಲ್ಲಿ ಬಿದರಹಳ್ಳಿಗೆ ಸಾಗಿಸಿದ್ರು. ನಿದ್ರೆಯಲ್ಲಿದ್ದ ಬಸವರಾಜನ್ನು ರಸ್ತೆ ಬದಿಯಲ್ಲೇ ಕುತ್ತಿಗೆ ಕತ್ತರಿಸಿ ಕೊಲೆ ಮಾಡಿದ್ರು. ಮುದ್ದೆ ತಿಂದ ಬಸವರಾಜ ನಿದ್ದೆಯಲ್ಲೇ ಶವವಾಗಿದ್ದ. ಶವವನ್ನು ಅಲ್ಲೇ ಬಿಟ್ಟು ಎಲ್ಲರೂ ತಮ್ಮತಮ್ಮ ಗೂಡು ಸೇರಿಕೊಂಡ್ರು.