ಮನೆಗಳ್ಳತನಕ್ಕೆ ಬಂದು ಮಹಿಳೆಯ ಕಿವಿ ಕತ್ತರಿಸಿದ ಖದೀಮರು! | Janata news
ರಾಯಚೂರು : ತಾಲೂಕಿನ ಕುಕುನುರು ಗ್ರಾಮದಲ್ಲಿ ಕಳ್ಳತನಕ್ಕೆ ಆಗಮಿಸಿದ್ದ ಮೂವರು ಖದೀಮರು ನಗದು ಚಿನ್ನಾಭರಣ ಕಳವು ಮಾಡಿದ್ದು, ಇದಕ್ಕೆ ಅಡ್ಡಿಪಡಿಸಲು ಬಂದ ಮಹಿಳೆ ಕಿವಿಯನ್ನೇ ಕತ್ತರಿಸಿದ ಘಟನೆ ನಡೆದಿದೆ.
ಮಳೆ ಸುರಿಯುತ್ತಿದ್ದ ಹಿನ್ನೆಲೆ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು. ಈ ವೇಳೆ ಖದೀಮರು ಗ್ರಾಮದ ಹನುಮಂತ್ರಾಯ ಎಂಬುವರ ಮನೆಗೆ ನುಗ್ಗಿ ಮನೆಯಲ್ಲಿದ್ದ ನಗದು, ಚಿನ್ನಾಭರಣ, ದಾಖಲೆ ಪತ್ರಗಳನ್ನು ದೋಚಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ ಹೋಗುವಾಗ ಮಹಿಳೆ ಅಡ್ಡಿಪಡಿಸಿದ್ದಕ್ಕೆ ಅವರ ಕಿವಿಯನ್ನೇ ಕತ್ತರಿಸಿ ಪರಾರಿಯಾಗಿದ್ದಾರೆ.
ಈ ವೇಳೆ ಕಳ್ಳತ ಗುಂಪಿನಲ್ಲಿದ್ದ ಅದೇ ಗ್ರಾಮದ ಮನೋಜ್ ಎನ್ನುವ ಯುವಕನನ್ನು ಹಿಡಿದ ಗ್ರಾಮಸ್ಥರು ಗಿಡಕ್ಕೆ ಕಟ್ಟಿ ಹಾಕಿ ಧರ್ಮದೇಟು ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಗ್ರಾಮೀಣ ಠಾಣೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಕಳೆದ ಕೆಲ ದಿನಗಳಿಂದ ಕುಕುನೂರು ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ಈ ತಂಡ ಕಳ್ಳತನ ಮಾಡುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.