ಮಳೆಗೆ ಮನೆ ಕುಸಿದು, ಮಲಗಿದ್ದವರ ಮೇಲೆ ಕಲ್ಲುಚಪ್ಪಡಿ ಬಿದ್ದು ಅಪ್ಪ-ಮಗ ದುರ್ಮರಣ, ತಾಯಿ-ಮಗಳ ಸ್ಥಿತಿ ಗಂಭೀರ | Janata news
ಚಿಕ್ಕಬಳ್ಳಾಪುರ: : ರಾತ್ರಿ ಸುರಿದ ಮಳೆಯಿಂದಾಗಿ ಮನೆಯೊಂದು ಕುಸಿದು, ತಂದೆ ಮಗ ಸಾವನ್ನಪ್ಪಿದ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ವೈಜಕೂರು ಗ್ರಾಮದಲ್ಲಿ ನಡೆದಿದೆ.
ತಂದೆ ರವಿಕುಮಾರ್ (42) ಮತ್ತು ಪುತ್ರ ರಾಹುಲ್(15) ಮೃತರು. ತಾಯಿ ಮುನಿರಾಜಮ್ಮ(37) ಮತ್ತು ಮಗಳು ರಕ್ಷಿತಾ (16) ಗಂಭೀರ ಗಾಯಗೊಂಡಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ತಡರಾತ್ರಿ ಸುರಿದ ಮಳೆಯಿಂದಾಗಿ ಮುಂಜಾನೆ 6:30ಕ್ಕೆ ಅಚಾನಕ್ಕಾಗಿ ಚಪ್ಪಡಿಕಲ್ಲಿನ ಮನೆ ಕುಸಿದಿದೆ. ಈ ವೇಳೆ ಮನೆಯಲ್ಲಿ ಮಲಗಿದ್ದ ನಾಲ್ವರ ಮೇಲೆ ಅವಶೇಷಗಳು ಉರುಳಿ ಬಿದ್ದಿವೆ. ಶಬ್ಧ ಕೇಳಿ ಸ್ಥಳಕ್ಕೆ ಬಂದ ಗ್ರಾಮಸ್ಥರು, ಅಗ್ನಿಶಾಮಕದಳ ಸಿಬ್ಬಂದಿಯೊಂದಿಗೆ ಸೇರಿ ಕುಟುಂಬಸ್ಥರನ್ನು ಹೊರತೆಗೆದಿದ್ದಾರೆ.
ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಬಂದ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ 5 ಲಕ್ಷ ರೂ. ಹಾಗೂ ವೈಯಕ್ತಿಕವಾಗಿ ತಲಾ 50 ಸಾವಿರ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದರು.