ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ಹೃದಯಾಘಾತ : ಶಸ್ತ್ರಚಿಕಿತ್ಸೆ ಬಳಿಕ ಚೇತರಿಕೆ | Janata news
ನವದೆಹಲಿ : ಭಾರತಕ್ಕೆ ಮೊಟ್ಟಮೊದಲ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಟ್ಟ ತಂಡದ ನಾಯಕ ಕಪಿಲ್ ದೇವ್ ಅವರು ಎದೆನೋವಿನ ದೂರು ನೀಡಿದ ನಂತರ ದೆಹಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಕಪಿಲ್ ಅವರಿಗೆ ಹೃದಯಾಘಾತವಾಗಿದ್ದು. ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಮತ್ತು ಚಿಕಿತ್ಸೆಯ ಕಾರ್ಯವಿಧಾನದ ನಂತರ ಅವರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ, ಎನ್ನಲಾಗಿದೆ.
ಎದೆನೋವಿನ ದೂರಿನೊಂದಿಗೆ ಕ್ರಿಕೆಟಿಗ ಕಪಿಲ್ ದೇವ್ ಅವರನ್ನು ಇಂದು ಶುಕ್ರವಾರ ಅಕ್ಟೋಬರ್ 23ರಂದು ಮುಂಜಾನೆ 1:00 ಕ್ಕೆ ಫೋರ್ಟಿಸ್ ಎಸ್ಕೋರ್ಟ್ಸ್ ಹಾರ್ಟ್ ಇನ್ಸ್ಟಿಟ್ಯೂಟ್ (ಓಖ್ಲಾ ರಸ್ತೆ) ತುರ್ತು ವಿಭಾಗಕ್ಕೆ ಕರೆದೊಯ್ಯಲಾಗಿದೆ. ಅವರನ್ನು ಆರೋಗ್ಯ ತಪಾಸಣೆ ಮಾಡಲಾದ ಬಳಿಕ, ಮಧ್ಯರಾತ್ರಿಯಲ್ಲಿ ತುರ್ತು ಪರಿಧಮನಿಯ ಆಂಜಿಯೋಪ್ಲ್ಯಾಸ್ಟಿ ನಡೆಸಲಾಯಿತು, ಎಂದು ಫೋರ್ಟಿಸ್ ಎಸ್ಕೋರ್ಟ್ಸ್ ಆಸ್ಪತ್ರೆ ಪ್ರಕಟಿಸಿದೆ.
ಟೀಂ ಇಂಡಿಯಾ ದಂತಕಥೆ, ಮಾಜಿ ನಾಯಕ ಕಪಿಲ್ ದೇವ್ ಗೆ ಹೃದಯಾಘಾತವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. 61 ವರ್ಷದ ಕಪಿಲ್ ದೇವ್ ಅವರಿಗೆ ಸದ್ಯ ಆಂಜಿಯೋ ಪ್ಲಾಸ್ಟಿ ಚಿಕಿತ್ಸೆ ನೀಡಲಾಗಿದೆ.
1983ರಲ್ಲಿ ಲಾರ್ಡ್ಸ್ನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತಿಯರು ಮರೆಯಲಾಗದ ಆಟವನ್ನಾಡಿ ಗೆಲುವಿಗೆ ಕಾರಣಕರ್ತರಾದ ಭಾರತದ ಶ್ರೇಷ್ಠ ಆಲ್ರೌಂಡರ್ ಕಪಿಲ್ ದೇವ್ ಆಗಿದ್ದಾರೆ.
ಕಪಿಲ್ ದೇವ್ ಅವರ ಜೀವನದ ಕಥಾ ಸಿನಿಮಾ ಬಹುನಿರೀಕ್ಷಿತ 83 ಚಿತ್ರ ಬಾಲಿವುಡ್ನಲ್ಲಿ ನಿರ್ಮಾಣವಾಗಿದ್ದು ಬಿಡುಗಡೆಗೆ ಸಿದ್ದಗೊಂಡಿದೆ. ಚಿತ್ರದಲ್ಲಿ ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್ ಸಿಂಗ್ ನಟಿಸಿದ್ದು, ಕಪಿಲ್ ಅವರ ಪತ್ನಿ ರೋಮಿ ಭಾಟಿಯಾ ಆಗಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದಾರೆ. ಕಪಿಲ್ ಗೆಟಪ್ ನಲ್ಲಿ ರಣ್ವೀರ್ ಸಿಂಗ್ ಇರುವ ಚಿತ್ರ ಅತಿಹೆಚ್ಚು ವೈರಲ್ ಆಗಿತ್ತು, ಹಾಗೆ ಕಪಿಲ್ ಅವರು ರಣ್ವೀರ್ ಸಿಂಗ್ ಅವರಂತೆ ಚಿತ್ರವಿಚಿತ್ರ ಉಡುಗೆಯಲ್ಲಿರುವ ಫೋಟೋ ಕೂಡ ಎಲ್ಲರ ಹುಬ್ಬೇರಿಸಿತ್ತು.
ಕಪಿಲ್ ದೇವ್ ಅವರ ಆರೋಗ್ಯದ ಬಗ್ಗೆ ದೇಶವಿದೇಶಗಳಿಂದ ಗಣ್ಯವ್ಯಕ್ತಿಗಳು ಕಳವಳ ವ್ಯಕ್ತಪಡಿಸಿದ್ದು, ಆರೋಗ್ಯ ಚೇತರಿಕೆಗೆ ಶುಭಕೋರಿದ್ದಾರೆ.