ನ್ಯೂಸ್ ಚಾನೆಲ್ ರಿಪೋರ್ಟರ್ ಹೆಸರಲ್ಲಿ ಬೆದರಿಸಿ ಲಕ್ಷಾಂತರ ಹಣ ವಸೂಲಿ: ಮೂವರು ಅರೆಸ್ಟ್ | Janata news
ಕಲಬುರ್ಗಿ : ಪತ್ರಕರ್ತರು ಎಂದು ಹೇಳಿಕೊಂಡು ಹಣ ವಸೂಲಿ ಮಾಡಿರುವ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಗಿರೀಶ್ ತುಂಬಗಿ, ಗುಂಡು ಗುತ್ತೆದಾರ್, ಹಾಗೂ ರವಿಚಂದ್ರ ಗುತ್ತೆದಾರ್ ಎಂದು ಗುರುತಿಸಲಾಗಿದೆ. ಆರೋಪಿಗಳು ಯೂಟ್ಯೂಬ್ ಚಾನೆಲ್ ನ ಹೆಸರಿನಲ್ಲಿ ಲಾರಿ ಚಾಲಕನನ್ನು ಹೆದರಿಸಿ ರೂ. 3.50 ಲಕ್ಷ ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಜೇವರ್ಗಿ ಹೊರವಲಯದಲ್ಲಿ ಲಾರಿ ಅಡ್ಡಗಟ್ಟಿದ ಆರೋಪಿಗಳು ಕಳ್ಳತನ ಮಾಡಿದ ಅಕ್ಕಿ ಸಾಗಿಸುತ್ತಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಕಲ್ಯಾಣ ಕರ್ನಾಟಕ ನ್ಯೂಸ್ ಚಾನೆಲ್ ರಿಪೋರ್ಟರ್ ಎಂದು ಆರೋಪಿಗಳು ಹೇಳಿಕೊಂಡು ಹೆದರಿಸಿದ್ದಾರೆ. ಟಿವಿ ಚಾನೆಲ್ ನಲ್ಲಿ ಪ್ರಸಾರ ಮಾಡುವುದಾಗಿ ಬೆದರಿಸಿ ಹಣ ಕೊಡುವಂತೆ ಕೇಳಿದ್ದಾರೆ.
ಲಾರಿ ಯಾದಗಿರಿ ಜಿಲ್ಲೆಯ ಗೂಗಿ ಗ್ರಾಮದಿಂದ ಬೀದರ್ ಜಿಲ್ಲೆಗೆ ಅಕ್ಕಿ ತೆಗೆದುಕೊಂಡು ಹೋಗುತ್ತಿತ್ತು. ಸಂದೀಪ್ ರಾಠೋಡ್ ಎಂಬ ಲಾರಿ ಚಾಲಕನ ಬಳಿ ಹಣ ಇಲ್ಲದ ಕಾರಣ, ಆರೋಪಿಗಳು ಗೂಗಲ್ ಪೇ ಮೂಲಕ 3.50 ಲಕ್ಷ ಹಣ ವರ್ಗಾಯಿಸಿಕೊಂಡಿದ್ದರು. ಲಾರಿ ಚಾಲಕ ಸಂದೀಪ್ ರಾಠೋಡ್ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.