ಮೈಸೂರಿನ ನಿವೃತ್ತ ಪ್ರೊಫೆಸರ್ ಕೊಲೆ ಪ್ರಕರಣ: ಖ್ಯಾತ ಗಾಯಕಿ ಅನನ್ಯಾ ಭಟ್ ತಂದೆ ವಿಶ್ವನಾಥ್ ಭಟ್ ಬಂಧನ | Janata news
ಮೈಸೂರು : ಕೊಲೆ ಪ್ರಕರಣದಲ್ಲಿ ಖ್ಯಾತ ಗಾಯಕಿ ಅನನ್ಯಾ ಭಟ್ ಅವರ ತಂದೆ ವಿಶ್ವನಾಥ್ ಭಟ್ ಅವರನ್ನು ಬಂಧಿಸಲಾಗಿದೆ. ನಿವೃತ್ತ ಪ್ರೊಫೆಸರ್ ಪರಶಿವಮೂರ್ತಿ ಅವರನ್ನು ಕೊಲೆ ಮಾಡಿಸಿದ್ದ ಆರೋಪದಲ್ಲಿ ವಿಶ್ವನಾಥ್ ಭಟ್ ಸೇರಿ ಐದು ಮಂದಿಯನ್ನು ಬಂಧಿಸಿದ್ದಾರೆ.
ಪರಶಿವಮೂರ್ತಿ ಅವರ ಕೊಲೆಗೆ ವಿಶ್ವನಾಥ್ ಭಟ್ 7 ಲಕ್ಷ ರೂ.ಗೆ ಸುಪಾರಿ ನೀಡಿದ್ದರು ಎಂಬುದು ವಿಚಾರಣೆ ವೇಲೆ ಬಯಲಾಗಿತ್ತು. ಹೀಗಾಗಿ, ಮೈಸೂರು ಪೊಲೀಸರು ವಿಶ್ವನಾಥ್ ಭಟ್ ಅವರನ್ನು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಗಾಯಕಿ ಅನನ್ಯ ಭಟ್ ಅವರ ತಂದೆ ಸೇರಿ ಮಧ್ಯಸ್ಥಿಕೆದಾರ ಮಡಿವಾಳಸ್ವಾಮಿ, ಸಂಸ್ಕೃತ ಪಾಠಶಾಲೆ ಮುಖ್ಯಶಿಕ್ಷಕ ಸಿದ್ದರಾಜು, ಸಹ ಶಿಕ್ಷಕ ಪರಶಿವ, ಗಾರೆ ಮೇಸ್ತ್ರಿ ನಿರಂಜನ್, ಐಡಿಎಫ್ ಸಿ ಬ್ಯಾಂಕ್ ಸಾಲ ವಸೂಲಾತಿ ಅಧಿಕಾರಿ ನಾಗೇಶ್ ಅವರನ್ನು ಬಂದಿಸಲಾಗಿದೆ.
ಸೆಪ್ಟೆಂಬರ್ 20ರಂದು ಮೈಸೂರಿನ ನಿವೇದಿತಾ ನಗರದಲ್ಲಿ ಪರಶಿವಮೂರ್ತಿ ಅವರನ್ನು ಕೊಲೆ ಮಾಡಲಾಗಿತ್ತು. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಧಿತರಿಂದ 55 ಸಾವಿರ ನಗದು, ನಾಲ್ಕು ದ್ವಿಚಕ್ರ ವಾಹನ, ಟಾಟಾ ಏಸ್ ಗೂಡ್ಸ್ ವಾಹನ, 8 ಮೊಬೈಲ್ ಫೋನ್ ಮತ್ತು 2 ಚಾಕುಗಳನ್ನು ವಶಕ್ಕೆ ಪಡೆಯಲಾಗಿದೆ.
ಕೊಲೆಯಾದ ಪರಶಿವಮೂರ್ತಿ ಪ್ರತಿ ತಿಂಗಳು ಸಂಗೀತ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಕಮಿಷನ್ ಗಾಗಿ ಪ್ರತೀ ತಿಂಗಳು ವಿಶ್ವನಾಥ್ ಭಟ್ ಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ರೋಸಿ ಹೋದ ವಿಶ್ವನಾಥ್ ಭಟ್ ಕೊಲೆಗೆ ಸುಪಾರಿ ನೀಡಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಡಿಸಿಪಿ ಗೀತಪ್ರಸನ್ನ ಮಾರ್ಗದರ್ಶನದಲ್ಲಿ ಕೃಷ್ಣರಾಜ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಂ.ಎಸ್.ಪೂರ್ಣಚಂದ್ರ ತೇಜಸ್ವಿ ಉಸ್ತುವಾರಿಯಲ್ಲಿ ಆರೋಪಿಗಳ ಪತ್ತೆಗಾಗಿ ಸರಸ್ವತಿಪುರಂ ಪೊಲೀಸ್ ಠಾಣೆಯ ಪಿಐ ಆರ್.ವಿಜಯಕುಮಾರ್, ಕುವೆಂಪುನಗರ ಪೊಲೀಸ್ ಠಾಣೆಯ ಪಿಐ ಜೆ.ಸಿ.ರಾಜು, ಸರಸ್ವತಿಪುರಂ ಪೊಲೀಸ್ ಠಾಣೆಯ ಪಿಎಸ್ ಐ ಭವ್ಯ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಸದ್ಯ ಗಾಯಕಿ ಅನನ್ಯ ಭಟ್ ಹಾಗೂ ಅವರ ತಾಯಿ ವಿಶ್ವನಾಥ್ನಿಂದ ಕಳೆದೆರಡು ವರ್ಷಗಳಿಂದಲೂ ತಾಯಿಯೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸೋಜುಗದ ಸೂಜಿಮಲ್ಲಿಗೆ ಹಾಡಿನಿಂದ ಪ್ರಸಿದ್ಧಿ ಪಡೆದಿದ್ದ ಅನನ್ಯಾ ಭಟ್ ಅನೇಕ ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕಿಯಾಗಿದ್ದಾರೆ. ರಾಮ ರಾಮ ರೇ ಸಿನಿಮಾದ ನಮ್ಮ ಕಾಯೋ ದ್ಯಾವನೇ, ಕೆಜಿಎಫ್ ಸಿನಿಮಾದ ಧೀರ ಧೀರ, ಟಗರು ಸಿನಿಮಾದ ಹೋಲ್ಡ್ ಆನ್ ಮತ್ತು ಮೆಂಟಲ್ ಹೋ ಜಾವಾ ಮುಂತಾದ ಸೂಪರ್ ಹಿಟ್ ಹಾಡುಗಳನ್ನು ಅನನ್ಯಾ ಭಟ್ ಹಾಡಿದ್ದಾರೆ.