ಸಕ್ಕರೆನಾಡು ಮಂಡ್ಯದಲ್ಲಿ ಜೈಲಿನಿಂದ ಬಿಡುಗಡೆಯಾದ ದಿನವೇ ರೌಡಿಶೀಟರ್ನ ಬರ್ಬರ ಹತ್ಯೆ! | Janata news
ಮಂಡ್ಯ : ಜೈಲಿನಿಂದ ಬಿಡುಗಡೆಯಾದ ದಿನವೇ ರೌಡಿಶೀಟರ್ ಯುವಕನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ಗುತ್ತಲು ರಸ್ತೆಯ ಬಸವನಗುಡಿ 4ನೇ ಕ್ರಾಸ್ನಲ್ಲಿ ಶುಕ್ರವಾರ ಸಂಜೆ ನಡೆದಿದೆ.
ನಿನ್ನೆ ಸಂಜೆ ಮಂಡ್ಯದ ಗುತ್ತಲು ಬಡಾವಣೆಯಲ್ಲಿ ರೌಡಿ ಶೀಟರ್ ಕುಳ್ಳಿಯ ಬರ್ಬರ ಹತ್ಯೆಯಾಗಿದ್ದು ಮಂಡ್ಯದ ಜನತೆ ಘಟನೆ ಕಂಡು ಬೆಚ್ಚಿ ಬಿದ್ದಿದ್ದಾರೆ.
ಕೊಲೆಯಾದ ವ್ಯಕ್ತಿ ಸುಮಂತ್(22) ಅಲಿಯಾಸ್ ಕುಳ್ಳಿಯಾಗಿದ್ದು, ಈತ ಸ್ವರ್ಣಸಂದ್ರ ಬಡಾವಣೆಯ ವಾಸವಾಗಿದ್ದ. ಈತ ಹಾಲು ಕೊಡಲು ಹೋದಾಗ ಬೈಕ್ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾದರು ಎನ್ನಲಾಗಿದೆ.
ಈಚೆಗೆ ಹೆದ್ದಾರಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿಗೆ ಸೇರಿಕೊಂಡಿದ್ದ ಸುಮಂತ್ ನಗರದಲ್ಲಿ ಮನೆಮನೆಗೆ ಹಾಲು ಹಾಕುವ ಕೆಲಸ ಮಾಡುತ್ತಿದ್ದ. ಸಂಜೆ ಹಾಲು ಹಾಕುವ ವೇಳೆ ಗುತ್ತಲಿನ ಬಸವಗುಡಿ ಬಡಾವಣೆಯ ಬಳಿ ಬೈಕ್ ನಲ್ಲಿ ಬಂದ ನಾಲ್ಕೈದು ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಹಾಲುಮತ ಜನಾಂಗದ ಸುಮಂತ್, ಸ್ವರ್ಣಸಂದ್ರದ ಅನ್ಯ ಜಾತಿಯ ಹುಡುಗಿಯೊಬ್ಬಳನ್ನು ಪ್ರೀತಿಸಿ ಕಳೆದ ಹಲವು ತಿಂಗಳ ಹಿಂದೆ ಹುಡುಗಿಯನ್ನು ಕರೆದುಕೊಂಡು ಬೆಂಗಳೂರಿಗೆ ಪರಾರಿಯಾಗಿದ್ದ. ಹುಡುಗಿ ಇನ್ನೂ ಅಪ್ರಾಪ್ತಳಾಗಿದ್ದರಿಂದ ಹುಡುಗಿಯ ಪೋಷಕರು ದೂರು ನೀಡಿದ್ದರು. ಅದರಂತೆ ಪೊಲೀಸರು ಇಬ್ಬರನ್ನು ಪತ್ತೆಹಚ್ಚಿ ಹುಡುಗಿಯನ್ನು ಪೋಷಕರಿಗೆ ಒಪ್ಪಿಸಿದ್ದರು ಎನ್ನಲಾಗಿದೆ. ಹುಡುಗಿಯ ವಿಚಾರದಲ್ಲಿ ಜೈಲು ಸೇರಿದ್ದ ಸುಮಂತ್, ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದ ದಿನವೇ ಹತ್ಯೆಯಾಗಿದೆ.
ಇನ್ನು ಈತ ಹೆದ್ದಾರಿಯ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದು ರೌಡಿ ಶೀಟರ್ ಪಟ್ಟಿಗೆ ಸೇರಿಸಲಾಗಿತ್ತು. ಅಲ್ಲದೇ ಈತ ನಗರದಲ್ಲಿ ರೌಡಿಸಂ ಮಾಡ್ತಾ ಬಾರ್ಗಳಲ್ಲಿ ಹೆದರಿಸಿ ಮದ್ಯ ಸೇವಿಸಿ ಪುಡಿ ರೌಡಿಗಳಿಗೆ ಬೆದರಿಸಿ ಹಣ ವಸೂಲಿ ಮಾಡ್ತಿದ್ದ ಎಂದು ಹೇಳಲಾಗ್ತಿದೆ.
ಅದೇ ದ್ವೇಷದ ಮೇಲೆ ಕೊಲೆ ನಡೆದಿದೆ ಎಂದು ಸುಮಂತ್ ತಂದೆ ಆರೋಪಿಸಿದ್ದಾರೆ. ಜೊತೆಗೆ ಕೆಲ ದಿನಗಳ ಹಿಂದೆ ಕೆಲ ಯುವಕರ ಜೊತೆ ಸುಮಂತ್ ಗಲಾಟೆ ಮಾಡಿಕೊಂಡಿದ್ದ ಎಂಬ ಸಂಗತಿ ತಿಳಿದುಬಂದಿದೆ. ದ್ವೇಷದ ಕಾರಣದಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡಿರುವ ಪೂರ್ವ ಠಾಣೆಯ ಪೊಲೀಸರು ಕೃತ್ಯ ಎಸಗಿದ ಆರೋಪಿಗಳ ಮಾಹಿತಿ ಕಲೆ ಹಾಕಿ ಬಂಧನಕ್ಕೆ ಬಲೆ ಬೀಸಿದ್ದಾರೆ.